ರಾಯಚೂರು: ನಗರದ ಆಶ್ರಯ ಕಾಲೊನಿ ಬಳಿಯ ಜಮಲಮ್ಮ ದೇವಸ್ಥಾನದ ಬಳಿಯ ಸರ್ಕಾರಿ ಜಾಗವನ್ನು ಸಾಮೂಹಿಕವಾಗಿ ಸಾರ್ವಜನಿಕರು ಒತ್ತುವರಿ ಮಾಡುತ್ತಿರುವ ಹಿಂದೆ ಶಾಸಕರ ಬೆಂಬಲಿಗ ಖೈಸರ್ ಹುಸೇನಿ ಅವರ ತಪ್ಪು ಹೇಳಿಕೆ ಕಾರಣವಾಗಿದೆ. ಇದರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿ ಮಹ್ಮದ್ ಶೇಖ್ ಫಾರೂಕ್ ಒತ್ತಾಯಿಸಿದರು.
ಆಶ್ರಯ ಕಾಲೊನಿಯ ಬಾಡಿಗೆ ಮನೆಗಳಲ್ಲಿ ವಾಸ ಮಾಡುತ್ತಿರುವ ನಿರಾಶ್ರಿತರಿಗೆ ಸೂಕ್ತ ವಸತಿ ಸೌಲಭ್ಯ ಒದಗಿಸಬೇಕು. ಹೊಸ ಆಶ್ರಯ ಕಾಲೊನಿ ಬಳಿಯಿರುವ ಸರ್ಕಾರಿ ಭೂಮಿ ಅತಿಕ್ರಮಣಕ್ಕೆ ಖೈಸೇರ್ ಹುಸೇನಿ ಬೆಂಬಲಿಸಿದ್ದಾರೆ. ವಸತಿರಹಿತರು ಈ ಪ್ರದೇಶದಲ್ಲಿ ವಾಸಿಸುವಂತೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಈ ಸಂಬಂಧ ಶಾಸಕರೊಂದಿಗೆ ಚರ್ಚಿಸಿ ನಿಮಗೆ ಹಕ್ಕು ಪತ್ರ ಕೊಡಿಸುವುದಾಗಿ ಸುಳ್ಳು ಭರವಸೆ ನೀಡುತ್ತಿದ್ದಾರೆ ಎಂದು ಬುಧವಾರ ಮಾಧ್ಯಮಗೋಷ್ಠಿಯಲ್ಲಿ ಆರೋಪಿಸಿದರು.
ಶಾಸಕ ಡಾ.ಶಿವರಾಜ ಪಾಟೀಲರ ಬೆಂಬಲಿಗ ಸೈಯದ್ ಖೈಸರ್ ಹುಸೇನಿ ಅವರು ಹರಡಿರುವ ಸುಳ್ಳು ಸುದ್ದಿಯನ್ನು ನಂಬಿ ನೂರಾರು ಜನರು ಸರ್ಕಾರಿ ಜಾಗ ಅತಿಕ್ರಮಣ ಮಾಡುತ್ತಿದ್ದಾರೆ. ಖಾಲಿ ನಿವೇಶನದ ಬಳಿ ಭೇಟಿ ನೀಡಿರುವ ಪೌರಾಯುಕ್ತರು ಖೈಸರ್ ಹುಸೇನಿ ಮೇಲೆ ಯಾವುದೇ ಕ್ರಮ ಜರುಗಿಸದೆ ಅಮಾಯಕ ಜೆಸಿಬಿ ಚಾಲಕ ಹಾಗೂ 21 ವರ್ಷದ ವೆಲ್ಡಿಂಗ್ ಕೆಲಸ ಮಾಡುವ ಯುವಕನ ವಿರುದ್ಧ ಎಫ್ ಐಆರ್ ದಾಖಲಿಸಿದ್ದಾರೆ ಎಂದು ಆರೋಪಿಸಿದರು.
ಆಶ್ರಯ ಕಾಲೊನಿಯಲ್ಲಿ ವಸತಿ ರಹಿತರಿಗಿಂತ ಹೆಚ್ಚಾಗಿ ಉಳ್ಳವರಿಗೆ ಮನೆಗಳನ್ನು ಮಂಜೂರು ಮಾಡಲಾಗಿದೆ. ಉಳ್ಳವರು ಬಾಡಿಗೆಗೆ ಆಶ್ರಯ ಮನೆಗಳನ್ನು ನೀಡುತ್ತಿದ್ದಾರೆ. ಈಚೆಗೆ ಆಶ್ರಯ ಕಾಲೊನಿಗೆ ಎಲ್ಲ ಮೂಲಸೌಕರ್ಯಗಳನ್ನು ಒದಗಿಸಿರುವುದರಿಂದ ಮನೆಗಳ ಮಾಲೀಕರು ತಾವೇ ವಾಸಿಸುವುದಾಗಿ ಹೇಳುತ್ತಿದ್ದಾರೆ. ಸರ್ಕಾರಿ ಭೂಮಿ ಅತಿಕ್ರಮಣಕ್ಕೆ ಬೆಂಬಲಿಸುತ್ತಿರುವ ಖೈಸರ್ ಹುಸೇನಿ ವಿರುದ್ಧ ಪೌರಾಯುಕ್ತರು ಹಾಗೂ ಜಿಲ್ಲಾಧಿಕಾರಿ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಮುಖಂಡರಾದ ವಾಹೀದ್, ಶಾಮೀದ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.