ರಾಯಚೂರು: ಲೈಂಗಿಕ ಸಂಪರ್ಕ ಹೊಂದಲು ಕೇಳಿದಾಗ ನಿರಾಕರಿಸಿದ ಪರಿಶಿಷ್ಟ ಜಾತಿ ಮಹಿಳೆಯ ಮೇಲೆ ಮಾನಭಂಗ ಮಾಡಲು ಯತ್ನಿಸಿದ ಆರು ಮಂದಿ ಆರೋಪಿಗಳಿಗೆ ಎರಡು ವರ್ಷ ಕಾರಾಗೃಹ ಶಿಕ್ಷೆ, ₹1.02 ಲಕ್ಷ ದಂಡ ವಿಧಿಸಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದ ಒಂದನೇ ಹೆಚ್ಚುವರಿ ನ್ಯಾಯಾಧೀಶ ಎಂ.ಮಹಾದೇವಯ್ಯ ಸೋಮವಾರ ತೀರ್ಪು ನೀಡಿದ್ದಾರೆ.
ಆರೋಪಿಗಳಾದ ಯಲ್ಲಮ್ಮ, ಅಂಬ್ರಪ್ಪ, ರಾಮಪ್ಪ, ರಮೇಶ, ಶಿವಕಪ್ಪ, ಮಜಪ್ಪ ಶಿಕ್ಷೆಗೆ ಗುರಿಯಾಗಿದ್ದಾರೆ. ದಂಡದ ಮೊತ್ತದಲ್ಲಿ ₹90 ಸಾವಿರ ನೊಂದವರಿಗೆ ಪರಿಹಾರ ನೀಡಲು ಆದೇಶದಲ್ಲಿ ತಿಳಿಸಿದ್ದಾರೆ.
ಬಳಗಾನೂರು ಠಾಣೆ ವ್ಯಾಪ್ತಿಯ ಚಿಕ್ಕಕಡಬೂರು ಗ್ರಾಮದಲ್ಲಿ 2013 ಜುಲೈ 13 ಈ ಘಟನೆ ನಡೆದಿತ್ತು. ಪೊಲೀಸ್ ಅಧಿಕಾರಿ ಎ.ಎಚ್.ಚಿಪ್ಪಾರ್ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಶೇಷ ಸಾರ್ವಜನಿಕ ಅಭಿಯೋಜಕ ಜಿ.ಸುದರ್ಶನ ವಾದ ಮಂಡಿಸಿದ್ದರು.