ಶಕ್ತಿನಗರ: ‘ಶಾಂತಿ, ನೆಮ್ಮದಿಗಾಗಿ ಪ್ರತಿಯೊಬ್ಬರೂ ಸಂಗೀತದ ಅಭಿರುಚಿ ಬೆಳೆಸಿಕೊಳ್ಳುವುದು ಅಗತ್ಯ’ ಎಂದು ಕಲಾವಿದ ಅಣ್ಣಿವೀರಯ್ಯ ಸಲಹೆ ನೀಡಿದರು.
ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ , ಸುಗುರೇಶ್ವರ ಯುವಕ ಮಂಡಳಿಯು ದೇವಸೂಗೂರಿನ ಸುಗುರೇಶ್ವರ ದಾಸೋಹ ಮಂಟಪದಲ್ಲಿ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಏರ್ಪಡಿಸಿದ್ದ ಸುಗಮ ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ದುಃಖವನ್ನು ಮರೆಸುವ ಶಕ್ತಿ ಸಂಗೀತಕ್ಕೆ ಮಾತ್ರವೇ ಇದೆ. ಮನುಷ್ಯನ ನೂರೆಂಟು ಕಷ್ಟಗಳನ್ನು ಮರೆಮಾಚುವಂಥ, ಕಷ್ಟಗಳನ್ನು ದೂರ ಮಾಡುವಂತಹ ಸಾಮರ್ಥ್ಯ ಸಂಗೀತ ಮಾತ್ರವೇ ಹೊಂದಿದೆ’ ಎಂದು ಅಭಿಪ್ರಾಯಪಟ್ಟರು.
‘ಸುಗಮ ಸಂಗೀತದ ಜೊತೆಗೆ ನೃತ್ಯ, ನಾಟಕ, ಯಕ್ಷಗಾನ, ಸೋಬಾನೆ ಪದ, ಬೀಸುವ ಕಲ್ಲಿನ ಪದ, ಅನೇಕ ಪ್ರಕಾರಗಳು ನಿಧಾನವಾಗಿ ನೇಪತ್ಯದತ್ತ ಸಾಗುತ್ತಿವೆ. ಟಿ.ವಿ ಮಾಧ್ಯಮ ಹಾಗೂ ಮೊಬೈಲ್ನಿಂದ ರಂಗಭೂಮಿ ಕಲೆಗಳು ನಶಿಸಿ ಹೋಗುತ್ತಿವೆ. ಇಂತಹ ಕಲೆಗಳನ್ನು ಮುಂದಿನ ಪೀಳಿಗೆಗೆ ಜೀವಂತವಾಗಿಡಲು ಪ್ರತಿಯೊಬ್ಬರ ಸಹಕಾರ ಅಗತ್ಯ’ ಎಂದರು.
ಸಿ.ಸುರೇಶ್ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಕಲಾವಿದರಾದ ಅಣ್ಣಿವೀರಯ್ಯ, ಸುಂದರೇಶ್, ಶಿಖರೇಶ್, ಮಲ್ಲಿಕಾರ್ಜುನ್ ವಿಭೂತಿ, ವಿಜಯಕುಮಾರ್ ದಿನ್ನಿ ಕ್ಯಾಸಿಯೋ, ಸಂಕೇತ್ ನಂದಿ, ತಬಲಾ ಸಾಥಿ ಅಮರೇಶ್ ಹೂಗಾರ್ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.