ಮಸ್ಕಿ (ರಾಯಚೂರು ಜಿಲ್ಲೆ): ಶ್ರಾವಣ ಕೊನೆ ಸೋಮವಾರ ಪವಿತ್ರ ದಿನವೆಂದು ನಂಬಿಕೆ ಇರುವುದರಿಂದ ಮಸ್ಕಿ ಪಟ್ಟಣದ ಬೆಟ್ಟದ ಮಲ್ಲಯ್ಯನ ದರ್ಶನಕ್ಕಾಗಿ ಭಕ್ತರು ಗುಂಪುಗುಂಪಾಗಿ ಬರುತ್ತಿದ್ದಾರೆ.
ದೇವಸ್ಥಾನವು ಎರಡನೆಯ ಶ್ರೀಶೈಲ ಎಂದು ಪ್ರಸಿದ್ಧಿ ಪಡೆದಿದೆ. ದೇವಸ್ಥಾನದಲ್ಲಿ ಭಕ್ತರು ವಿಶೇಷ ಪೂಜೆ ಸಲ್ಲಿಸಿ ಹರಕೆ ಪೂರ್ಣ ಮಾಡಿಕೊಳ್ಳುತ್ತಿದ್ದಾರೆ.
ಸಾಕಷ್ಟು ಎತ್ತರದಲ್ಲಿರುವ ಬೆಟ್ಟದ ಮೇಲಿನ ದೇವಸ್ಥಾನಕ್ಕೆ ಬೆಳಿಗ್ಗೆ 4 ಗಂಟೆಯಿಂದಲೇ ಭಕ್ತರ ಸಂಚಾರ ಆರಂಭವಾಗಿದೆ. ಮಹಿಳೆಯರು , ಮಕ್ಕಳು ಕೂಡಾ ಕಾಲ್ನಡಿಗೆಯಲ್ಲಿ ಬೆಟ್ಟ ಹತ್ತಿ ಮಲ್ಲಯ್ಯನ ವಿಗ್ರಹಕ್ಕೆ ಧಾರ್ಮಿಕ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸುತ್ತಿದ್ದಾರೆ.
ಬಂಡೆಯಲ್ಲಿ ಮೂಡಿರುವ ಮಲ್ಲಯ್ಯ ವಿಗ್ರಹಕ್ಕೆ ಅಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳನ್ನು ದೇವಸ್ಥಾನದ ಅರ್ಚಕರು ನೆರವೇರಿಸಿದರು. ಸೋಮವಾರ ಸಂಜೆವರೆಗೂ ಭಕ್ತರ ದಂಡು ಕಾಣುತ್ತದೆ.
ಗಚ್ಚಿನಮಠದ ವರರುದ್ರಮುನಿ ಸ್ವಾಮೀಜಿ, ಶಾಸಕ ಆರ್. ಬಸನಗೌಡ ತುರ್ವಿಹಾಳ, ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್, ತಹಶೀಲ್ದಾರ್ ಕವಿತಾ ಆರ್. ಸೇರಿದಂತೆ ಅನೇಕರು ಮುಖಂಡರು, ಅಧಿಕಾರಿಗಳು ಸಹ ಬೆಟ್ಟ ಹತ್ತಿ ಮಲ್ಲಯ್ಯನ ವಿಗ್ರಹಕ್ಕೆ ಪೂಜೆ ಸಲ್ಲಿಸಿದರು.