ರಾಯಚೂರು: ನಗರದ ಗಂಗಾನಿವಾಸ್ ಬಡಾವಣೆಯಲ್ಲಿರುವ ನಾಗಮ್ಮರೆಡ್ಡಿ ಅವರು ದೇವಸ್ಥಾನ ಮತ್ತು ಧರ್ಮಕಾರ್ಯಗಳಿಗೆ ಉದಾರವಾಗಿ ದಾನ ಮಾಡುವ ಮೂಲಕ ಮನೆಮಾತಾಗಿದ್ದಾರೆ.
ಏಕಾಂಗಿ ಬದುಕು ನಡೆಸುತ್ತಿರುವ ಅವರು, ಪ್ರತಿವರ್ಷವೂ ಸಾರ್ವಜನಿಕರನ್ನು ಉಚಿತವಾಗಿ ಕಾಶಿಯಾತ್ರೆ ಕರೆದೊಯ್ಯುತ್ತಿರುವುದು ವಿಶೇಷ. ಈ ವರ್ಷ ಕಾಶಿಯಾತ್ರೆ ಮಾಡುವುದಕ್ಕೆ 140 ಯಾತ್ರಿಗಳಿಗೆ ನೆರವು ನೀಡಿ ಗಮನ ಸೆಳೆದಿದ್ದಾರೆ.
ರಾಯಚೂರಿನಿಂದ ನವದೆಹಲಿ, ಅಲ್ಲಿಂದ ಕಾಶಿಗೆ ರೈಲಿನ ಮೂಲಕ ಯಾತ್ರೆ ಮಾಡುತ್ತಿದ್ದಾರೆ. ಒಬ್ಬರಿಗೆ ಪ್ರಯಾಣವೆಚ್ಚ ₹2 ಸಾವಿರ ಇದ್ದು, ಈಗಾಗಲೇ ₹2.8 ಲಕ್ಷ ಮೊತ್ತದಲ್ಲಿ ರೈಲ್ವೆ ಟಿಕೆಟ್ ಬುಕಿಂಗ್ ಮಾಡಿಸಿದ್ದಾರೆ. ಸಂಚಾರ ವೆಚ್ಚವನ್ನೆಲ್ಲ ನಾಗಮ್ಮರೆಡ್ಡಿ ಅವರು ಭರಿಸುತ್ತಿದ್ದಾರೆ.
ಕಳೆದ 10 ವರ್ಷಗಳಿಂದ ಈ ಧರ್ಮಕಾರ್ಯ ಮಾಡುತ್ತಿರುವ ನಾಗಮ್ಮ ಅವರು, 'ದೇವರು ಕೊಟ್ಟಿರುವುದನ್ನು ದೇವರಿಗೆ ಖರ್ಚು ಮಾಡುತ್ತಿದ್ದೇನೆ. ಇದರಲ್ಲಿ ನನ್ನದೇನು ಇಲ್ಲ' ಎನ್ನುತ್ತಾರೆ.
ಕಳೆದ ವರ್ಷ 180 ಯಾತ್ರಿಗಳು ಇವರ ನೆರವಿನಲ್ಲಿ ಕಾಶಿಯಾತ್ರೆ ಮಾಡಿದ್ದರು. ಅದಕ್ಕೂ ಮೊದಲು ರಾಯಚೂರಿನಿಂದ ಕಾಶಿ, ನೇಪಾಳದ ಗಡಿವರೆಗೂ ಯಾತ್ರಾರ್ಥಿಗಳನ್ನು ಕರೆದೊಯ್ದಿದ್ದರು.
ಜಿಲ್ಲಾ ಕೋರ್ಟ್ ನಲ್ಲಿ ಪರಿಚಾರಕಿಯಾಗಿದ್ದ ನಾಗಮ್ಮ ಅವರು 2019 ರಲ್ಲಿ ನಿವೃತ್ತರಾಗಿದ್ದಾರೆ. ಪ್ರತಿ ತಿಂಗಳು ₹15 ಸಾವಿರ ಪಿಂಚಣಿ ಪಡೆಯುತ್ತಾರೆ. ಇದೇ ಹಣವನ್ನು ಕೂಡಿಸಿಟ್ಟು ಧರ್ಮ ಕಾರ್ಯಕ್ಕೆ ವಿನಿಯೋಗಿಸುತ್ತಿದ್ದಾರೆ. ಮಕ್ಕಳಿಲ್ಲದ ನಾಗಮ್ಮರೆಡ್ಡಿ ಅವರ ಪತಿಯೂ ತೀರಿಹೋಗಿದ್ದಾರೆ. ಸಂಬಂಧಿಗಳಿಂದ ದೂರ ಉಳಿದು ಜೀವನ ನಡೆಸುತ್ತಿದ್ದಾರೆ.
ಪ್ರಜಾಪಿತ ಬ್ರಹ್ಮಕುಮಾರಿ ವಿಶ್ವವಿದ್ಯಾಲಯ, ಗಂಗಾ ನಿವಾಸದ ವೀರಭದ್ರೇಶ್ವರ ದೇವಸ್ಥಾನ, ಐಡಿಎಸ್ ಎಂಟಿ ಕಾಲೋನಿಯ ತಾಯಮ್ಮ ದೇವಸ್ಥಾನ ಹಾಗೂ ಗಣೇಶೋತ್ಸವಕ್ಕೆ ಆರ್ಥಿಕ ನೆರವು ಒದಗಿಸಿದ್ದಾರೆ.