ರಾಯಚೂರು: ಜನವರಿ 28 ರಂದು ಸಂಜೆ 4 ಗಂಟೆಗೆ ಮಾನ್ವಿ ತಾಲ್ಲೂಕಿನ ಮಲ್ಲಿಗೆ ಮಡುವು ಗ್ರಾಮದಲ್ಲಿ ಕುಮಾರವ್ಯಾಸ ಜಯಂತಿಯ ಪ್ರಯುಕ್ತ ಕುಮಾರವ್ಯಾಸ ಭಾರತ ವಾಚನ ವ್ಯಾಖ್ಯಾನ ಹಾಗೂ ‘ಅಂತರಂಗದ ಅರಮನೆ’ ಕೃತಿ ಬಿಡುಗಡೆ ಸಮಾರಂಭ ನಡೆಯಲಿದೆ ಸಾಹಿತಿ ರಾಜಾ ನಾಯಕ ತಿಳಿಸಿದರು.
ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಬಸವಪ್ರಭು ಪಾಟೀಲ ಬೆಟ್ಟದೂರು ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಉಪನ್ಯಾಸಕ ರಾಮಣ್ಣ ಹಿರೇಭೇರಿಗಿ ಪುಸ್ತಕ ಪರಿಚಯ ಮಾಡಲಿದ್ದಾರೆ ಎಂದು ನಗರದಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಹೇಳಿದರು.
ಶಾಸಕ ಹಂಪಯ್ಯ ನಾಯಕ ಅಧ್ಯಕ್ಷತೆ ವಹಿಸಲಿದ್ದಾರೆ. ವಿಶ್ವಮಾನವ ಸಂಗೀತ ಯಾನ ಸಂಸ್ಥೆಯ ಅಧ್ಯಕ್ಷ ವಿದ್ವಾನ್ ಎಂ ಖಾಸೀಮ್ ಮಲ್ಲಿಗೆ ಮಡುವು ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ. ಹಿರಿಯ ಸಾಹಿತಿಗಳು, ಕಲಾವಿದರು ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ಹೇಳಿದರು.