ರಾಯಚೂರು: ಪಿಂಜಾರ್, ನದಾಫ್, ಮನ್ಸೂರಿ ಜಾತಿ ಪ್ರಮಾಣಪತ್ರಗಳನ್ನು ಪರಿಶೀಲನೆ ಮಾಡಿ ನೀಡಬೇಕು ಎಂದು ಒತ್ತಾಯಿಸಿ ಅಖಿಲ ಕರ್ನಾಟಕ ಪಿಂಜಾರ್ ನದಾಫ್ ಮನ್ಸೂರಿ ಹಕ್ಕುಗಳ ಸಂಘ ಜಿಲ್ಲಾ ಘಟಕದ ಪದಾಧಿಕಾರಿಗಳು ಮಂಗಳವಾರ ರಾಯಚೂರು ತಹಶೀಲ್ದಾರ್ ಸುರೇಶ ವರ್ಮ ಅವರಿಗೆ ಮನವಿ ಸಲ್ಲಿಸಿದರು.
ರಾಯಚೂರು ನಗರ ಹಾಗೂ ಗ್ರಾಮೀಣ ಪ್ರದೇಶ ಸೇರಿ ಪಿಂಜಾರ್, ನದಾಫ್, ಮನ್ಸೂರಿ ಜನಾಂಗದ ಸುಮಾರು 10 ಸಾವಿರ ಜನಸಂಖ್ಯೆ ಇದೆ. ಅತಿ ಹಿಂದುಳಿದ (ಪ್ರವರ್ಗ–1) ವರ್ಗಕ್ಕೆ ಸೇರಿದ್ದು, ಸರ್ಕಾರಿ ಸೌಲಭ್ಯ ಸಿಗುತ್ತಿಲ್ಲ. ಅನ್ಯ ಸಮಾಜದ ಕೆಲವರು ಪಿಂಜಾರ್ ಜಾತಿ ಪ್ರಮಾಣಪತ್ರ ಪಡೆದು ಸೌಲಭ್ಯ ಪಡೆದು ವಂಚಿಸುತ್ತಿದ್ದಾರೆ ಎಂದು ದೂರಿದರು.
ಅರ್ಹರಿಗೆ ಶಿಫಾರಸು ಮಾಡಿ ಪಂಚನಾಮೆ ಮಾಡಿಸಿ ವರದಿ ಪಡೆದುಕೊಂಡರೂ ಜಾತಿ ಪ್ರಮಾಣಪತ್ರ ನೀಡಲು ವಿಳಂಬ ಮಾಡಲಾಗುತ್ತಿದೆ. ಕೂಡಲೇ ಪರಿಶೀಲಿಸಿ ವಿತರಣೆ ಮಾಡಬೇಕು ಎಂದು ಆಗ್ರಹಿಸಿದರು.
ಸಂಘದ ಸಂಸ್ಥಾಪಕ ರಾಜ್ಯ ಅಧ್ಯಕ್ಷ ಇಮ್ರಾನ್ ಬಡೇಸಾಬ್, ಮುಖಂಡರಾದ ರಾಜ್ ಮೊಹಮ್ಮದ್, ಇಮಾಂ, ಮಹಮ್ಮದ್ ಶಫಿ ಗುಂಜಳ್ಳಿ, ಬಂದೆನವಾಜ್, ಮೆಹಬೂಬ, ಶಾಲಂ ಸಾಬ್, ಮುಸ್ತಫಾ, ಅಸ್ಲಂ, ಮಹಮ್ಮದ್ ಅಲಿ ಹಾಜರಿದ್ದರು.