ರಾಯಚೂರು: ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ನೇತೃತ್ವದ ಸರ್ಕಾರ ಅಲ್ಪಸಂಖ್ಯಾತ ಸಮುದಾಯದ ಮೇಲೆ ಹಾಗೂ ಪಾಪುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಕಾರ್ಯಕರ್ತರನ್ನು ಗುರಿಯಾಗಿಸಿ ದೌರ್ಜನ್ಯ ಮಾಡುತ್ತಿದೆ ಎಂದು ಆರೋಪಿಸಿ ಪಾಪುಲರ್ ಫ್ರಂಟ್ ಆಫ್ ಇಂಡಿಯಾ ಜಿಲ್ಲಾ ಘಟಕದ ಕಾರ್ಯಕರ್ತರು ನಗರದ ಟಿಪ್ಪುಸುಲ್ತಾನ್ ಉದ್ಯಾನದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ಉತ್ತರಪ್ರದೇಶ ದೇಶದ ಎರಡನೇ ಅತಿದೊಡ್ಡ ರಾಜ್ಯವಾಗಿದ್ದು ಅತಿಹೆಚ್ಚು ಜನಸಂಖ್ಯೆ ಹೊಂದಿದೆ. ಈ ರಾಜ್ಯದಲ್ಲಿ ಮುಸ್ಲಿಮರ, ಅಲ್ಪಸಂಖ್ಯಾತರ ವಿರುದ್ಧ ಕೋಮು ಪ್ರಚೋದಿತ ಹಿಂಸಾಚಾರ, ದಲಿತರ ಮೇಲೆ ಪದೆಪದೇ ದೌರ್ಜನ್ಯ ನಡೆಯುತ್ತಿದೆ. ಈಗ ಅಪರಾಧ ಸುದ್ದಿಗಳಿಂದ ಕ್ರಿಮಿನಲ್ ಪೊಲೀಸ್ ರಾಜ್ಯವಾಗಿ ಮಾರ್ಪಟ್ಟಿದೆ. ಯೋಗಿ ಆದಿತ್ಯನಾಥರು ಮುಸ್ಲಿಂ ಧಾರ್ಮಿಕ ಸ್ಥಳಗಳ ಅವಹೇಳನ, ಹಿಂಸಾಚಾರದ ಪ್ರಚೋದನೆ ಮುಸ್ಲಿಂ ವಿರೋಧಿ ಅಜೆಂಡಾ ಬಹಿರಂಗವಾಗಿ ತೋರ್ಪಡಿಸುತ್ತಿದ್ದಾರೆ ಎಂದು ದೂರಿದರು.
ಮಹಿಳೆಯರ, ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ, ದೌರ್ಜನ್ಯ ಎದುರಿಸುತ್ತಿದ್ದು ನ್ಯಾಯಕ್ಕಾಗಿ ಹೋರಾಡಿದರೆ ಪೊಲೀಸರು ದೌರ್ಜನ್ಯ ಎಸೆಗುತ್ತಿದ್ದಾರೆ. ಗೋ ರಕ್ಷಕರ ಹೆಸರಿನಲ್ಲಿ ಮುಸ್ಲಿಮರ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆ. ಪಾಫುಲರ್ ಫ್ರಂಟ್ ಆಫ್ ಇಂಡಿಯಾ ನಾಯಕರನ್ನು ಹಿಂಸಾಚಾರದ ಮಾಸ್ಟರ್ ಮೈಂಡ್ ಎಂಬಂತೆ ಚಿತ್ರಿಸಿ ನ್ಯಾಯಾಲಯದಲ್ಲಿ ಇದನ್ನು ಸಾಬೀತುಪಡಿಸಲು ವಿಫಲವಾಗಿದ್ದರೂ ಕಾರ್ಯಕರ್ತರನ್ನು ಗುರಿಯಾಗಿಸಿ ಸರ್ಕಾರದ ಮೇಲೆ ಹಾಕಿರುವ ಪಿಐಎಲ್ ದೂರು ಹಿಂಪಡೆಯುವಂತೆ ಪೊಲೀಸರಿಂದ ದೌರ್ಜನ್ಯ ಎಸೆಗುತ್ತಿದ್ದಾರೆ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಮೊಹಮ್ಮದ್ ಇಸ್ಮಾಯಿಲ್, ಕಾರ್ಯದರ್ಶಿ ಆಸೀಮ್, ಅಝರ್ , ದಾವೂದ್, ಮೊಹಮ್ಮದ್ ಶಫಿ, ಗಫ್ಫರ್ ಇದ್ದರು.