ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆ ಮೊದಲೇ ಮಾನ್ವಿಯಲ್ಲಿ ರಾಜಕೀಯ ಚಟುವಟಿಕೆ!

ಕಾಂಗ್ರೆಸ್‌, ಜೆಡಿಎಸ್‌ ಮುಖಂಡರಿಗೆ ಶಿವನಗೌಡ ನಾಯಕ ಪ್ರವೇಶವು ಹೊಸ ಸವಾಲು
Last Updated 15 ಜುಲೈ 2022, 19:30 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲೆಯ ದೇವದುರ್ಗ ವಿಧಾನಸಭೆ ಕ್ಷೇತ್ರದಲ್ಲಿ ಸತತ ಗೆಲುವು ಸಾಧಿಸುತ್ತಾ ಬಂದಿರುವ ಶಾಸಕ ಶಿವನಗೌಡ ನಾಯಕ ಅವರು ಕಳೆದ ಎರಡು ವರ್ಷಗಳಿಂದ ಮಾನ್ವಿ ವಿಧಾನಸಭೆ ಕ್ಷೇತ್ರದಲ್ಲಿಯೂ ಪ್ರಾರಂಭಿಸಿರುವ ಸಾಮಾಜಿಕ ಸೇವಾ ಕಾರ್ಯಗಳು ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮುಖಂಡರ ನಿದ್ದೆಗೆಡಿಸಿವೆ?

ವಿಧಾನಸಭೆ ಚುನಾವಣೆಯು ಇನ್ನೂ ಒಂದು ವರ್ಷ ಇರುವಾಗಲೇ ಮಾನ್ವಿಯಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸಾದಂತಿದೆ. ಶಾಸಕ ಶಿವನಗೌಡ ನಾಯಕ ಅವರು ತಮ್ಮ ಹುಟ್ಟೂರು ಮಾನ್ವಿ ತಾಲ್ಲೂಕಿನ ಕಸನದೊಡ್ಡಿ ಬೇರು ಹಿಡಿದು ಈಗಾಗಲೇ ಜನರ ಪ್ರೀತಿ ಸಂಪಾದಿಸುವತ್ತ ದಾಪುಗಾಲು ಇಟ್ಟಿದ್ದಾರೆ. ಅಪಾರ ಜನಸ್ತೋಮದ ಮಧ್ಯೆ ತಮ್ಮ 45ನೇ ಹುಟ್ಟುಹಬ್ಬವನ್ನು ಮಾನ್ವಿ ಪಟ್ಟಣದಲ್ಲಿ ಆಚರಿಸಿಕೊಂಡು, ರಾಜಕೀಯ ಎದುರಾಳಿಗಳಿಗೆ ಪರೋಕ್ಷವಾಗಿ ಸೆಡ್ಡು ಹೊಡೆದಿದ್ದಾರೆ.

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಮಾನ್ವಿ ವಿಧಾನಸಭೆ ಕ್ಷೇತ್ರದಲ್ಲಿ ಕಮಲ ಅರಳಿಸುವ ಕನಸನ್ನು ಶಿವನಗೌಡ ನಾಯಕ ಅವರು ಜನರ ಎದುರಲ್ಲೇ ಘೋಷಿಸಿದ್ದಾರೆ. ಕ್ಷೇತ್ರದಲ್ಲಿ ನನೆಗುದಿಗೆ ಬಿದ್ದಿರುವ ಸಮಸ್ಯೆಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮೂಲಕ ಪರಿಹಾರ ಒದಗಿಸುವ ಭರವಸೆ ಕೂಡಾ ನೀಡಿದ್ದಾರೆ. ಆದರೆ, ಬಿಜೆಪಿ ಅಭ್ಯರ್ಥಿಯಾಗಿ ತಾವೇ ಸ್ಪರ್ಧಿಸುವುದನ್ನು ಖಚಿತಪಡಿಸಿಲ್ಲ.

ಕಾಂಗ್ರೆಸ್‌ ಭದ್ರಕೋಟೆಯಾಗಿದ್ದ ಮಾನ್ವಿ ವಿಧಾನಸಭೆ ಕ್ಷೇತ್ರದಲ್ಲಿ 2018 ರ ಚುನಾವಣೆಯಲ್ಲಿ ರಾಜಾ ವೆಂಕಟಪ್ಪ ನಾಯಕ ಅವರು ಮೊದಲಬಾರಿ ಜೆಡಿಎಸ್‌ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಇದುವರೆಗೂ ಕಾಂಗ್ರೆಸ್‌ ಮತ್ತು ಜೆಡಿಎಸ್‌ ವಿರುದ್ಧ ಪ್ರಬಲ ಸ್ಪರ್ಧೆ ಒಡ್ಡುವುದಕ್ಕೂ ಬಿಜೆಪಿಗೆ ಸಾಧ್ಯವಾಗಿಲ್ಲ. ಈ ಬಾರಿ ಶಿವನಗೌಡ ನಾಯಕ ಮಾನ್ವಿ ಸಾರಥ್ಯ ವಹಿಸುತ್ತಿರುವುದು, ವಿರೋಧ ಪಕ್ಷಗಳ ಮುಖಂಡರಿಗೆ ಭಾರಿ ಸವಾಲಾಗಿ ಪರಿಣಮಿಸಿದೆ. ಈ ಸವಾಲು ಎದುರಿಸಲು ಜೆಡಿಎಸ್‌, ಕಾಂಗ್ರೆಸ್‌ ಮುಖಂಡರು ಸನ್ನದ್ಧರಾಗಿರುವ ಮುನ್ಸೂಚನೆ ಇನ್ನೂ ನೀಡಿಲ್ಲ. ಆದರೆ, ಬಿಜೆಪಿ ಪರ ಕಾರ್ಯಚಟುವಟಿಕೆ ಪ್ರಾರಂಭವಾಗಿರುವುದನ್ನು ನೋಡಿಯಾದರೂ ಚುನಾವಣೆ ಘೋಷಣೆ ಪೂರ್ವದಲ್ಲೇ ಎಚ್ಚೆತ್ತುಕೊಳ್ಳುವುದು ಅನಿವಾರ್ಯವಾಗಿದೆ.

ಮಾನ್ವಿಯಲ್ಲಿ ಕೆಎಸ್‌ಎನ್‌ ಅಭಿಮಾನಿ ಬಳಗವು ಶಾಸಕ ಶಿವನಗೌಡ ನಾಯಕ ಅವರ ಹೆಸರಿನಲ್ಲಿ ಕೋವಿಡ್‌ ಮಹಾಮಾರಿ ಸಂದರ್ಭದಲ್ಲಿ ಅನ್ನದಾಸೋಹದ ಮೂಲಕ ಜನರನ್ನು ತಲುಪಿತ್ತು. ಇದೀಗ ಜನರನ್ನು ಕರೆತಂದು ‘ಶಿವಾಭಿಮಾನ‘ ಅಭಿನಂದನಾ ಕಾರ್ಯಕ್ರಮ ಮಾಡಿರುವುದು ರಾಜಕೀಯ ಚರ್ಚೆಗೆ ಗ್ರಾಸವಾಗಿದೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಮಾನ್ವಿಯಿಂದ ಶಿವನಗೌಡ ನಾಯಕ ಸ್ಪರ್ಧಿಸುತ್ತಾರೆಯೋ? ಅವರ ಸಂಬಂಧಿಗಳಿಗೆ ಅಥವಾ ಆಪ್ತರಿಗೆ ಟಿಕೆಟ್‌ ಕೊಡಿಸುತ್ತಾರೆಯೋ? ಎನ್ನುವ ಚರ್ಚೆಗಳು ಪ್ರಾರಂಭವಾಗಿವೆ. ದೇವದುರ್ಗ ವಿಧಾನಸಭೆ ಕ್ಷೇತ್ರದಲ್ಲಿ ಶಿವನಗೌಡ ನಾಯಕ ಅವರಿಗೆ ಈ ಸಲ ಅಭದ್ರತೆ ಕಾಡುತ್ತಿದೆಯೇ ಎನ್ನುವ ಬಗ್ಗೆಯೂ ರಾಜಕೀಯ ನಿಪುಣರು ಮಾತನಾಡಿಕೊಳ್ಳುತ್ತಿದ್ದಾರೆ.

ಶಾಸಕ ರಾಜಾ ವೆಂಕಟಪ್ಪ ನಾಯಕ ಅವರು ರಸ್ತೆ,ಕುಡಿಯುವ ನೀರು ಹಾಗೂ ಮೂಲ ಸೌಕರ್ಯಗಳ ಅಭಿವೃದ್ಧಿಯಿಂದ ಜನರನ್ನು ಸೆಳೆಯುತ್ತಿರುವುದು ಕೂಡಾ ನಿಜ. ಕ್ರೀಡಾಂಗಣ, ಬಸ್‌ ಡಿಪೋದಂತಹ ಅನೇಕ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮಾಡಿದ್ದಾರೆ. ಆದರೆ, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಶ್ರೀರಕ್ಷೆ ಮಾಡಿಕೊಳ್ಳುವಲ್ಲಿ ಎಷ್ಟರಮಟ್ಟಿಗೆ ಸಫಲರಾಗುತ್ತಾರೆ ಎನ್ನುವ ಪ್ರಶ್ನೆಗೆ ಸದ್ಯಕ್ಕೆ ಉತ್ತರವಿಲ್ಲ.

ಮಾನ್ವಿ ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರವಾಗುವ ಪೂರ್ವ ಸತತ ಗೆಲುವು ಸಾಧಿಸಿದ್ದ ಹಾಲಿ ಎಐಸಿಸಿ ಕಾರ್ಯದರ್ಶಿ ಎನ್‌.ಎಸ್‌.ಬೋಸರಾಜ ಅವರು, ಈಗಲೂ ತಮ್ಮದೇ ಆದ ಪ್ರಭಾವ ಉಳಿಸಿಕೊಂಡಿದ್ದಾರೆ. ಆದರೆ, ಕಾಂಗ್ರೆಸ್‌ನಿಂದ ಯಾವ ಅಭ್ಯರ್ಥಿಯನ್ನು ಚುನಾವಣೆ ಕಣಕ್ಕೆ ಇಳಿಸುತ್ತಾರೆ ಎನ್ನುವುದು ಇನ್ನೂ ಅನಿಶ್ಚಿತ.

ಮಾನ್ವಿಯಲ್ಲಿ ಬಹಿರಂಗವಾಗಿಯೇ ತೊಡೆ ತಟ್ಟಿರುವ ಶಿವನಗೌಡ ನಾಯಕ ಅವರ ವಿರುದ್ಧ ಜೆಡಿಎಸ್‌, ಕಾಂಗ್ರೆಸ್‌ ನಾಯಕರು ಪೈಪೋಟಿ ಯಾವಾಗ ಶುರು ಮಾಡುತ್ತಾರೆ ಎನ್ನುವುದನ್ನು ಎದುರು ನೋಡಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT