ಕವಿತಾಳ: ‘ಅಂಗನವಾಡಿ ಕೇಂದ್ರಗಳನ್ನು ಹೆಚ್ಚು ಕ್ರೀಯಾಶೀಲಗೊಳಿಸುವ ನಿಟ್ಟಿನಲ್ಲಿ ಕಾರ್ಯಕರ್ತೆಯರಿಗೆ ಅಗತ್ಯ ತರಬೇತಿ ನೀಡಲಾಗುವುದು’ ಎಂದು ಮೇಲ್ವಿಚಾರಕಿ ಲಕ್ಷ್ಮೀಬಾಯಿ ಹೇಳಿದರು.
ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗಾಗಿ ಪಟ್ಟಣದ ಉರ್ದು ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಏರ್ಪಡಿಸಿದ್ದ ಶಾಲಾ ಪೂರ್ವ ಶಿಕ್ಷಣ ಬಲವರ್ಧನೆ ಕುರಿತ 4ನೇ ಹಂತದ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
‘ಪೂರ್ವ ಪ್ರಾಥಮಿಕ ಶಾಲಾ ಹಂತದಲ್ಲಿ ಮಕ್ಕಳನ್ನು ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗುವಂತೆ ನೋಡಿಕೊಳ್ಳುವ ಮಹತ್ವದ ಜವಾಬ್ದಾರಿ ಕಾರ್ಯಕರ್ತೆಯರ ಮೇಲಿದೆ, ಸೂಕ್ತ ತರಬೇತಿ ಮತ್ತು ಮಾರ್ಗದರ್ಶನದ ಮೂಲಕ ಮತ್ತಷ್ಟು ಪರಿಣಾಮಕಾರಿಯಾಗಿ ನಿರ್ವಹಿಸಬೇಕಿದೆ’ ಎಂದರು.
‘ಚಿತ್ರಗಳ ಮೂಲಕ ವಸ್ತುಗಳು, ಪ್ರಾಣಿಗಳನ್ನು ಗುರುತಿಸುವುದು, ಅಕ್ಷರಗಳು, ಅಂಕಿ, ಸಂಖ್ಯೆಗಳನ್ನು ಪರಿಚಯಿಸುವ ಮೂಲಕ ಮಕ್ಕಳನ್ನು ಶಾಲಾ ಪೂರ್ವ ಶಿಕ್ಷಣಕ್ಕೆ ತಯಾರಿ ಮಾಡುವ ಹಂತದಲ್ಲಿ ಕಾರ್ಯಕರ್ತೆಯರ ಪಾತ್ರ ಮಹತ್ವದ್ದಾಗಿದೆ’ ಎಂದು ಸಂಪನ್ಮೂಲ ವ್ಯಕ್ತಿ ನೀಲಮ್ಮ ಹೇಳಿದರು.
ಪ್ರಭಾರ ಮುಖ್ಯ ಶಿಕ್ಷಕಿ ಶಾಹೀನಾ ಬೇಗಂ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶಿಕ್ಷಕಿ ತಜಹೀನ್ ಸುಲ್ತಾನ್, ಕಾರ್ಯಕರ್ತೆಯರಾದ ಮರಿಯಮ್ಮ, ಲಕ್ಷ್ಮೀ, ಕಮಲಾ ಕೋಟಿ, ಶಶಿಕಲಾ, ಮೀನಾಕ್ಷಿ, ರೂಪಾ ಮತ್ತು ಖಾಜಾಬೇಗಂ ಮತ್ತಿತರರು ಇದ್ದರು.