ರಾಯಚೂರು: ‘ನಾನು ಅಧ್ಯಕ್ಷರ ಬಳಿ ಒಂದು ರೂಪಾಯಿ ವಸೂಲಿ ಮಾಡಿಲ್ಲ. ಅದನ್ನು ಸಾಬೀತು ಪಡಿಸಿದರೆ ನಗರಸಭೆ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ’ ಎಂದು ನಗರಸಭೆ ಸದಸ್ಯ ಜಿಂದಪ್ಪ ಹೇಳಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಕಾಂಗ್ರೆಸ್ ಮುಖಂಡ ನರಸಿಂಹಲು ಮಾಡಗಿರಿ ಮಾತನಾಡಿ, ‘ನಗರಸಭೆ ಅಧ್ಯಕ್ಷ ಈ.ವಿನಯಕುಮಾರ್ ಅವರು ಸದಸ್ಯರೊಂದಿಗೆ ಗೂಂಡಾ ವರ್ತನೆ ತೋರುತ್ತಿದ್ದು, ಅವರ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರಿಗೆ ದೂರು ಸಲ್ಲಿಸಲಾಗುವುದು‘ ಎಂದು ತಿಳಿಸಿದರು.
‘ಹಾದಿ ಬೀದಿಗಳಲ್ಲಿ ನಗರಸಭೆ ಸದಸ್ಯರ ಮೇಲೆ ಹಲ್ಲೆಗೆ ಮುಂದಾಗುತ್ತಿದ್ದಾರೆ. ತಿರಸ್ಕೃತಗೊಂಡಿದ್ದ ಚೈತನ್ಯ ಎಲೆಕ್ಟ್ರಿಕಲ್ ಟೆಂಡರ್ ಮುಂಜೂರು ಮಾಡಿ ವಿದ್ಯುತ್ ದೀಪಗಳನ್ನು ಅಳವಡಿಸದೆ ಲಕ್ಷಾಂತರ ಹಣ ಅವ್ಯವಹಾರ ಮಾಡಿದ್ದಾರೆ‘ ಎಂದು ಆರೋಪಿಸಿದ ಅವರು, ಈ ಬಗ್ಗೆ ಜಿಲ್ಲಾಧಿಕಾರಿ ಮತ್ತು ಲೋಕಾಯುಕ್ತರಿಗೂ ದೂರು ಸಲ್ಲಿಸಲಾಗುವುದು ಎಂದು ಹೇಳಿದರು.
‘ವಿನಾಕಾರಣ ಹಣ ವಸೂಲಿ ಆರೋಪ ಮಾಡಿದ್ದು, ಅದನ್ನು ಸಾಬೀತು ಮಾಡಿದರೆ ನಗರಸಭೆ ಉಪಾಧ್ಯಕ್ಷ ಸ್ಥಾನದಲ್ಲಿರುವ ನನ್ನ ಪತ್ನಿಗೆ ರಾಜೀನಾಮೆ ಸಲ್ಲಿಸಲು ಹೇಳುತ್ತೇನೆ’ ಎಂದು ತಿಳಿಸಿದರು.