ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು: 18 ಸ್ಥಳಗಳಲ್ಲಿ ತರಕಾರಿ ಮಾರಾಟವಿದ್ದರೂ ಜನದಟ್ಟಣೆ

Last Updated 19 ಮೇ 2021, 4:11 IST
ಅಕ್ಷರ ಗಾತ್ರ

ರಾಯಚೂರು: ಕಳೆದ ಮೂರು ದಿನಗಳಿಂದ ಬಿಗಿಯಾಗಿದ್ದ ಲಾಕ್‌ಡೌನ್ ಬುಧವಾರ ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 12 ಗಂಟೆವರೆಗೂ ಸಡಿಲಿಕೆ ಮಾಡಿದ್ದು ತರಕಾರಿ ಹಾಗೂ ದಿನಸಿ ಖರೀದಿಗೆ ಅವಕಾಶ ನೀಡಲಾಗಿದೆ.

ತರಕಾರಿ ಮಾರುಕಟ್ಟೆಯನ್ನು ವಿಕೇಂದ್ರೀಕರಣ ಗೊಳಿಸಿ 18 ಸ್ಥಳಗಳಲ್ಲಿ ಮಾರಾಟಕ್ಕೆ ವ್ಯವಸ್ಥೆ ಮಾಡಿದ್ದರೂ ಜನದಟ್ಟಣೆ ಅತಿಯಾಗಿದೆ. ಮಾರುಕಟ್ಟೆಯ ರಸ್ತೆಗಳಲ್ಲಿ ಎಲ್ಲಿ ನೋಡಿದರೂ ಜನರು ಕೈ ಚೀಲ ಹಿಡಿದು ಧಾವಂತದಿಂದ ಸಂತೆಗೆ ಹೋಗುತ್ತಿರುವುದು ಕಾಣುತ್ತಿದೆ. ದಿನಸಿ ಮಾರಾಟದ ಕಿರಾಣಿ ಅಂಗಡಿಗಳ ಎದುರಿನಲ್ಲಿ ಜನರ ಸರದಿ ಎದ್ದು ಕಾಣುತ್ತಿದೆ. ಸಾಮಾನ್ಯ ದಿನಗಳಲ್ಲಿ ಜನರೇ ಕಾಣದಿದ್ದ ಕಿರಾಣಿ ಅಂಗಡಿಗಳ ಎದುರು ಈಗ ದಟ್ಟಣೆ ಕಾಣುತ್ತಿದೆ.

ಜನರನ್ನು ನಿಯಂತ್ರಿಸಲು ಹೋಂಗಾರ್ಡ್ ಅಥವಾ ಪೋಲಿಸರನ್ನು ಸಾಕಷ್ಟು ಸಂಖ್ಯೆಯಲ್ಲಿ ನಿಯೋಜನೆ ಮಾಡಿಲ್ಲ. ಕೆಲವೇ ಸ್ಥಳಗಳಲ್ಲಿ ನಗರಸಭೆ ಸಿಬ್ಬಂದಿಯು ತರಕಾರಿ ಮಾರಾಟಗಾರರನ್ನು ಚದುರಿಸುವ ಪ್ರಯತ್ನ ಮಾಡುತ್ತಿದ್ದಾರೆ.

ರಾಯಚೂರು ನಗರದ ಮಹಿಳಾ ಸಮಾಜ ಮೈದಾನ, ಮಾವಿನಕೆರೆ ಸ್ಟೇಷನ್ ಸರ್ಕಲ್, ಚಂದ್ರಬಂಡಾ ರಸ್ತೆ, ವೀರಣ್ಣ ಸರ್ಕಲ್ ಪಟೇಲ್ ಚೌಕ್, ವಾಸವಿ ನಗರ ಸೇರಿದಂತೆ ಹಲವು ಕಡೆಗಳಲ್ಲಿ ತರಕಾರಿ ಮಾರಾಟ ಮಾಡಲಾಗುತ್ತಿದೆ.

ಜಿಲ್ಲೆಯ ತಾಲ್ಲೂಕು ಕೇಂದ್ರಗಳು, ಹೋಬಳಿ, ಪಟ್ಟಣ ಕೇಂದ್ರಗಳಲ್ಲಿಯೂ ದಿನಸಿ ಮತ್ತು ತರಕಾರಿ ಖರೀದಿಗಾಗಿ ಜನರು ಮುಗಿ ಬಿದ್ದಿದ್ದಾರೆ.

ಪಾಲನೆಯಾಗದ ನಿಯಮ: ಕೋವಿಡ್ ಎರಡನೆಯ ನಿಯಂತ್ರಣಕ್ಕಾಗಿ ಜಿಲ್ಲೆಯಲ್ಲಿ ಲಾಕ್ ನ್ ಬಿಗಿ ಗೊಳಿಸಲಾಗಿದೆ. ಆದರೆ ಜನರು ನಿಯಮ ಪಾಲನೆಗೆ ಮಹತ್ವ ನೀಡುತ್ತಿಲ್ಲ. ಜೀವ ಉಳಿಸಿಕೊಳ್ಳುವ ಆತಂಕಕ್ಕಿಂತ ಜೀವನ ನಡೆಸುವ ಧಾವಂತಕ್ಕೆ ಒಳಗಾಗಿದ್ದಾರೆ. ಅಂತರ ಕಾಪಾಡದೆ ಮಾರುಕಟ್ಟೆಯಲ್ಲಿ ವ್ಯವಹರಿಸುವುದು ಕಂಡುಬರುತ್ತಿದೆ. ವ್ಯಾಪಾರಿಯೊಂದಿಗೆ ಮಾಸ್ಕ್ ತೆರೆದು ಸಂಭಾಷಣೆ ಮಾಡುವುದು ಸಾಮಾನ್ಯವಾಗಿದೆ. ವ್ಯಾಪಾರಿಗಳು ಕೂಡ ಬಹುತೇಕ ಮಾಸ್ಕ್ ಅನ್ನು ಮೂಗು ಬಾಯಿಗೆ ಧರಿಸದೆ, ಗಲ್ಲಕ್ಕೆ ನೇತು ಬಿಟ್ಟುಕೊಂಡು ವ್ಯವಹರಿಸುತ್ತಿದ್ದಾರೆ.

ಮದ್ಯ ಮಾರಾಟವಿಲ್ಲ: ಮೂರು ದಿನಗಳ ನಂತರ ಲಾಕ್ ಡೌನ್ ಸಡಿಲಿಕೆ ಮಾಡಿದ್ದರೂ ಮದ್ಯ ಮಾರಾಟಕ್ಕೆ ಅವಕಾಶ ನೀಡಿಲ್ಲ.

ಮತ್ತೆ ಲಾಕ್‌ಡೌನ್: ಜಿಲ್ಲೆಯಲ್ಲಿ ಮತ್ತೆ ಮೇ 22 ರವರೆಗೂ ಬಿಗಿ ಲಾಕ್ ಡೌನ್ ಜಾರಿ ಮಾಡಲಾಗಿದೆ. ಮದ್ಯಾಹ್ನ 12 ರಿಂದ ತುರ್ತು ಅಗತ್ಯಗಳನ್ನು ಹೊರತುಪಡಿಸಿ ಎಲ್ಲವನ್ನು ಬಂದ್ ಮಾಡಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT