ಮಸ್ಕಿ: ಬೆಳಗಾವಿಯ ಜಿಲ್ಲೆಯ ಅನಗೋಳದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಭಗ್ನ ಹಾಗೂ ಕನ್ನಡ ಬಾವುಟಕ್ಕೆ ಅಪಮಾನ ಮಾಡಿದ ಪ್ರಕರಣ ಖಂಡಿಸಿ ಪಟ್ಟಣದಲ್ಲಿ ಬುಧವಾರ ತಾಲ್ಲೂಕು ಹಾಲುಮತ ಸಮಾಜದಿಂದ ಪ್ರತಿಭಟನೆ ನಡೆಸಲಾಯಿತು.
ಬಸವೇಶ್ವರ ನಗರದ ತಹಶೀಲ್ದಾರ್ ಕಚೇರಿ ಮುಂದೆ ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದ ಸಮಾಜದ ಮುಖಂಡ ನಿರುಪಾದೆಪ್ಪ ವಕೀಲ 'ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನೆ ಬಲಿದಾನ ಮಾಡಿದ ಕ್ರಾಂತಿಕಾರಿ ಸಂಗೋಳ್ಳಿ ರಾಯಣ್ಣ ಅವರ ಪ್ರತಿಮೆ ಭಗ್ನ ಮಾಡಿ ಕನ್ನಡ ಧ್ವಜಕ್ಕೆ ಅಪಮಾನ ಮಾಡಿದ ಎಂಇಎಸ್ ಕಾರ್ಯಕರ್ತರನ್ನು ಬಂಧಿಸಬೇಕು' ಎಂದು ಆಗ್ರಹಿಸಿದರು.
ಸಮಾಜದ ಮುಖಂಡ ಮಳ್ಳಪ್ಪ ಪೂಜಾರಿ, ಮಲ್ಲನಗೌಡ ಸುಂಕನೂರು, ಕರಿಯಪ್ಪ ಹಾಲಾಪೂರ, ದುರಗೇಶ ವಕೀಲ, ಮಲ್ಲಣ್ಣ ಮಸ್ಕಿ, ಹನುಮಂತಪ್ಪ ಡೊಣ್ಣಮರಡಿ, ಶಿವಣ್ಣ ಉದ್ಬಾಳ, ಹನುಮೇಶ ಬಾಗೋಡಿ, ಬಸವರಾಜ ಗೌಡನಭಾವಿ ಸೇರಿದಂತೆ ಹಾಲುಮತ ಸಮಾಜದ ಅನೇಕರು ಪಾಲ್ಗೊಂಡಿದ್ದರು.
ಘಟನೆ ಖಂಡಿಸಿ ತಹಶೀಲ್ದಾರ್ ಆರ್.ಕವಿತಾ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.