ಬಿ.ಎ. ನಂದಿಕೋಲಮಠ
ಲಿಂಗಸುಗೂರು: ಪರಿಸರ ಸಂರಕ್ಷಣೆ ದಿನಾಚರಣೆ ಹೆಸರಲ್ಲಿ ಗುಂಡಿ ತೋಡಿ, ನೂರಾರು ಸಸಿಗಳ ನಾಟಿ ಮಾಡಿ, ಕೆಲ ದಿನ ನೀರು ಎರೆದು ಮೈ ಮರೆತು ಕುಳಿತುಕೊಳ್ಳುವುದು ಸಾಮಾನ್ಯ. ಮಹಾಂತೇಶ ಗೌಡರು ಶಿಕ್ಷಣ ಸಂಸ್ಥೆ ಕಟ್ಟಿ ಪರಿಸರದ ಮಧ್ಯೆ ಶಿಕ್ಷಣ ನೀಡುತ್ತಿರುವುದು ಎದ್ದುಕಾಣುತ್ತದೆ.
ಶಾಲೆಯ ಸುತ್ತಲೂ 500ಕ್ಕೂ ಹೆಚ್ಚು ವೈವಿಧ್ಯಮಯ ಗಿಡಮರ ನಾಟಿ ಮಾಡಿದ್ದಾರೆ. ವೈವಿಧ್ಯಮಯ ಹೂ ಬಳ್ಳಿಗಳು, ಶಾಲಾ ಕಟ್ಟದ ಮುಂಭಾಗ ಹಸಿರು ಹುಲ್ಲಿನ ಹಾಸಿಗೆ ಲಾನ್, ಮಧ್ಯದಲ್ಲಿ ರೈತನೋರ್ವ ಜೋಡೆತ್ತು ಹೊಡೆದುಕೊಂಡು ಹೋಗುತ್ತಿರುವ ಚಿತ್ರಣ ಕಣ್ಮನ ಸೆಳೆಯುತ್ತದೆ.
ಒಂದೂವರೆ ದಶಕದ ಹಿಂದಿನಿಂದ ಪರಿಸರದ ಮಧ್ಯೆಯೆ ಸಾಂಸ್ಕೃತಿಕ ಕಾರ್ಯ ಚಟುವಟಿಕೆಗಳನ್ನು ನಡೆಸಿಕೊಂಡು ಬಂದಿದ್ದಾರೆ. ಲಕ್ಷಾಂತ ಹಣ ಖರ್ಚು ಮಾಡುವ ಜೊತೆಗೆ ಮನೆಯ ಮಕ್ಕಳನ್ನು ಸಂರಕ್ಷಣೆ ಮಾಡಿದಂತೆ ನಿತ್ಯ ಬೆಳಿಗ್ಗೆ ಮತ್ತು ಸಂಜೆ ಪ್ರತಿ ಗಿಡ, ಹೂಬಳ್ಳಿ, ಲಾನ್ ಪರೀಕ್ಷಿಸಿ ನೀರು ಅಗತ್ಯವೆನ್ನಿಸಿದಾಗ ಅಗತ್ಯ ಔಷದೋಪಚಾರ ಕಾಳಜಿ ವಹಿಸುತ್ತ ಬಂದಿದ್ದಾರೆ.
ಪಾಠದ ತರಗತಿಗಳಿಂದ ಹೊರಗಡೆ ಕಾಲಿಟ್ಟರಾಯ್ತು ಮಕ್ಕಳು ಹೂಬಳ್ಳಿ, ಗಿಡಮರಗಳ ತಾಗುತ್ತ, ಆಟವಾಡುತ್ತ ಕಾಲಹರಣ ಮಾಡುತ್ತವೆ. ಪರಿಸರ ಮಧ್ಯೆ ಗುಬ್ಬಚ್ಚಿ ಗೂಡುಗಳು, ಬೇರೆ ಬೇರೆ ಪ್ರದೇಶಗಳಿಂದ ಬಂದ ವಿಭಿನ್ನ ಬಗೆಯ ಪಕ್ಷಿಗಳ ನೋಟ, ಅವುಗಳ ಕಿಲವರ ಕೇಳುವ ಇಂಪು ಮಕ್ಕಳ ಶೈಕ್ಷಣಿಕ ಚಟುವಟಿಕೆಗೆ ಪ್ರೋತ್ಸಾಹಿಸುವಂತ ವಾತಾವರಣ ಕಾಣಸಿಗುತ್ತದೆ.
ಸ್ಪಂದನ ಶಿಕ್ಷಣ ಸಂಸ್ಥೆ ಅಧ್ಯಕ್ಷ ಮಹಾಂತೇಶ ಗೌಡರ್ ಅವರನ್ನು ಸಂಪರ್ಕಿಸಿದಾಗ, ‘ಪಠ್ಯ ವಿಷಯ ಆಧಾರಿತ ಶಿಕ್ಷಣ ಎಲ್ಲರೂ ನೀಡುತ್ತಾರೆ. ಪಠ್ಯ ವಿಷಯಗಳ ಜೊತೆಗೆ ಪರಿಸರ, ಪರಿಸರ ಸಂರಕ್ಷಣೆ, ಸಾವಿರಾರು ಗಿಡಗಳ ಪಾಲನೆ ಪೋಷಣೆ, ಅವುಗಳಿಂದ ಜೀವ ಸಂಕುಲಕ್ಕಾಗುವ ಲಾಭಾಂಶಗಳ ಕುರಿತು ಜ್ಞಾನ ನೀಡುತ್ತಿದ್ದೇವೆ. ಗಿಡಮರ ಬೆಳೆಸುವುದು ಹವ್ಯಾಸವಾಗಿದೆ’ ಎಂದು ಹೇಳುತ್ತಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.