ಮಸ್ಕಿ: 'ಮಹಿಳೆಯರು ಸ್ವಸಹಾಯ ಗುಂಪುಗಳನ್ನು ರಚಿಸಿಕೊಂಡು ಸರ್ಕಾರದಿಂದ ದೊರೆಯುವ ಸಹಾಯದಿಂದ ಸ್ವಉದ್ಯೋಗ ಆರಂಭಿಸಿ ಸ್ವಾವಲಂಬಿ ಜೀವನ ಸಾಗಿಸಬೇಕು‘ ಎಂದು ರಾಚೋಟಿಯ ಚೆನ್ನಮಲ್ಲ ಸ್ವಾಮೀಜಿ ಕರೆ ನೀಡಿದರು.
ತಾಲ್ಲೂಕಿನ ಗುಂಡಾ ಗ್ರಾಮದಲ್ಲಿ ಬುಧವಾರ ಸ್ಪೂರ್ತಿ ಸಂಜೀವಿನಿ ಗ್ರಾಮ ಒಕ್ಕೂಟದಿಂದ ಏರ್ಪಡಿಸಿದ್ದ ಉನ್ನತಿ ಯೋಜನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ‘ಕೇಂದ್ರ ಹಾಗೂ ರಾಜ್ಯ ಸರ್ಕಾರ ಮಹಿಳೆಯರು, ಬಡ ಕೂಲಿ ಕಾರ್ಮಿಕರಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತರುತ್ತವೆ. ಆ ಯೋಜನೆಗಳ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದರು.
ಯೋಜನೆಯ ಮೇಲ್ವಿಚಾರಕ ಪ್ರಕಾಶ್ ನಾಯ್ಕ, ಸ್ಪೂರ್ತಿ ಸಂಜೀವಿನಿ ಒಕ್ಕೂಟದ ಅದ್ಯಕ್ಷೆ ಚಂದ್ರಮ್ಮ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಸವರಾಜ ಕಣ್ಣೂರು, ಗೀರಿಜಾ, ಅಜಯ್, ಲಕ್ಷ್ಮೀ, ವಿಜಯಲಕ್ಷ್ಮೀ ಸೇರಿದಂತೆ ಇತರರು ಇದ್ದರು.
ಮಹಿಳೆಯರಿಗೆ ಹಪ್ಪಳ ಸೇರಿದಂತೆ ವಿವಿಧ ಪದಾರ್ಥಗಳನ್ನು ಸಿದ್ಧಪಡಿಸುವ ತರಬೇತಿ ನೀಡಲಾಯಿತು. ಅನೇಕ ಮಹಿಳೆಯರು ಪಾಲ್ಗೊಂಡಿದ್ದರು.