ರಾಯಚೂರು: ‘ದೇಶದ ಸ್ವಾತಂತ್ರ್ಯಕ್ಕಾಗಿ ಅನೇಕ ಕಾಂಗ್ರೆಸ್ ನಾಯಕರು ತ್ಯಾಗ, ಬಲಿದಾನ ಮಾಡಿದ್ದಾರೆ. ಹಿರಿಯರು ಪಕ್ಷದ ತತ್ವ ಸಿದ್ಧಾಂತವನ್ನು ಯುವಕರಿಗೆ ತಿಳಿಸುವ ಮೂಲಕ ಕಾಂಗ್ರೆಸ್ ಬಲವರ್ಧನೆಗೆ ಮುಂದಾಗಬೇಕು’ ಎಂದು ಸಣ್ಣ ನೀರಾವರಿ ಸಚಿವ ಎನ್ ಎಸ್ ಬೋಸರಾಜು ಸಲಹೆ ನೀಡಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಗುರುವಾರ ಆಯೋಜಿಸಿದ್ದ ಕಾಂಗ್ರೆಸ್ 139ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ದೇಶದ ಸ್ವಾತಂತ್ರ್ಯಕ್ಕೆ ಚಳವಳಿ ಪ್ರಾರಂಭಿಸಿದ್ದು ಕಾಂಗ್ರೆಸ್. ಅನೇಕ ನಾಯಕರು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಾರೆ. ಇಂತಹ ಇತಿಹಾಸ ಹೊಂದಿರುವ ಪಕ್ಷದ ಕಾರ್ಯಕರ್ತರಾದ ನಾವೆಲ್ಲರೂ ಹೆಮ್ಮೆ ಪಡಬೇಕು’ ಎಂದು ಕಾರ್ಯಕರ್ತರಿಗೆ ತಿಳಿಸಿದರು.
‘ಪಕ್ಷ ಸಂಘಟನೆಗೆ ಒಗ್ಗಟ್ಟಾಗಿ ಸಂಕಲ್ಪ ಮಾಡಬೇಕಾಗಿದೆ. ಕಾಂಗ್ರೆಸ್ ತತ್ವ ಸಿದ್ಧಾಂತ ಹಾಗೂ ಜಾತ್ಯತೀತ ನಿಲುವಿನ ಬಗ್ಗೆ ಈಗಿನ ಯುವಕರಿಗೆ ಮಾಹಿತಿ ನೀಡಿ ಅವರನ್ನು ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆ ನೀಡಬೇಕಾಗಿದೆ’ ಎಂದು ತಿಳಿಸಿದರು.
ಕೆಪಿಸಿಸಿ ಸದಸ್ಯ ಪಾರಸಮಲ್ ಸುಖಾಣಿ ಮಾತನಾಡಿ, ‘ಮಹಾತ್ಮಗಾಂಧಿ, ಜವಾಹರ್ ಲಾಲ್ ನೆಹರು, ಲಾಲ್ ಬಹಾದ್ದೂರ್ ಶಾಸ್ತ್ರಿ, ಇಂದಿರಾ ಗಾಂಧಿ, ಸೋನಿಯಾಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ಶ್ರಮದಿಂದ ಕಾಂಗ್ರೆಸ್ ಹೆಮ್ಮರವಾಗಿ ಬೆಳೆದಿದೆ’ ಎಂದು ಹೇಳಿದರು.
‘ರಾಷ್ಟ್ರದ ಸಮಗ್ರ ಅಭಿವೃದ್ಧಿಗೆ ಕಾಂಗ್ರೆಸ್ ಕೊಡುಗೆ ಅಪಾರವಾಗಿದೆ. ಪಕ್ಷದ ಕಾರ್ಯಕರ್ತರು, ಮುಖಂಡರು ಸಂಘಟನಾತ್ಮಕವಾಗಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆಲ್ಲಿಸಿ ಪಕ್ಷವನ್ನು ಅಧಿಕಾರಕ್ಕೆ ತರುಲು ಶ್ರಮಿಸಬೇಕು’ ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಪಕ್ಷಕ್ಕೆ ಅನೇಕ ವರ್ಷದಿಂದ ಶ್ರಮಿಸಿದ ಮುಖಂಡರಾದ ಜಯವಂತರಾವ್ ಪತಂಗೆ, ವಕೀಲ ಜಾವೀದ್ ಉಲ್ ಹಕ್, ಯಲ್ಲಪ್ಪ ಚಪ್ಪಳಿಕೆ, ಮೆಹಬೂಬ ಅಲಿ, ಕರಿವಳಪ್ಪ ಕಾಚಪೂರ, ಭೀಮಶಪ್ಪ ಪೂಜಾರಿ ಅವರನ್ನು ಸನ್ಮಾನಿಸಲಾಯಿತು.
ಶಾಸಕ ಹಂಪಯ್ಯ ನಾಯಕ, ಜಿ.ಬಸವರಾಜ ರೆಡ್ಡಿ, ಕೆ.ಶಾಂತಪ್ಪ, ಶ್ರೀದೇವಿ ರಾಜಶೇಖರ ನಾಯಕ, ಅಮರೇಗೌಡ ಹಂಚಿನಾಳ, ಜಯಣ್ಣ, ಜಿ.ಶಿವಮೂರ್ತಿ, ತಾಯಣ್ಣ ನಾಯಕ, ಆಂಜನೇಯ ಕುರುಬದೊಡ್ಡಿ, ರುದ್ರಪ್ಪ ಅಂಗಡಿ, ಭೀಮನಗೌಡ ನಾಗಡದಿನ್ನಿ, ಕಿರಿಲಿಂಗಪ್ಪ, ಅಬ್ದುಲ್ ಅಜೀಜ್, ಗಫೂರ್ ಸಾಬ್, ಸುಧೀಂದ್ರ ಜಾಗೀರದಾರ, ದೇವಣ್ಣ ನಾಯಕ, ಶ್ರೀಕಾಂತ , ಜಿ.ಸುರೇಶ, ರಾಮಕೃಷ್ಣ ನಾಯಕ, ಕಡಗೋಳ ಶರಣಪ್ಪ, ದರೂರು ಬಸವರಾಜ ಪಾಟೀಲ, ಪವನ ಕುಮಾರ, ಹರಿಬಾಬು, ಸಿದ್ಧಪ್ಪ ಭಂಡಾರಿ, ಹನುಮಂತು ಜೂಕೂರು, ಕಡಗೋಳ ಚೇತನಕುಮಾರ, ಉರುಕುಂದಪ್ಪ, ರಾಘವೇಂದ್ರ, ರಾಣಿ ರಿಚರ್ಡ್, ನಾಗವೇಣಿ ಪಾಟೀಲ, ನವನೀತ ಆದೋನಿ, ಶಶಿಕಲಾ ಭೀಮರಾಯ, ಪ್ರೇಮಲತಾ, ಪ್ರತಿಭಾರೆಡ್ಡಿ, ಈರಮ್ಮ, ಭಾರತಿ, ರಜಿಯಾ ಪಟೇಲ್, ವಿಜಯಕುಮಾರ ಸ್ವಾಮಿ, ಮಲ್ಲೇಶ ಕೊಲಮಿ, ಇಲ್ಲೂರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.