ಲಿಂಗಸುಗೂರು: ‘ಸರ್ಕಾರಗಳ ನಿರ್ದೇಶನ ಮೇರೆಗೆ ರೈತರಿಂದ ಬೆಂಬಲ ಬೆಲೆಯಲ್ಲಿ ಕಡಲೆ ಖರೀದಿ ಮಾಡುವುದಕ್ಕಾಗಿ ಕಡಲೆ ಖರೀದಿ ಕೇಂದ್ರ ಆರಂಭಿಸಲಾಗಿದ್ದು ರೈತರು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ತಾಲ್ಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘದ ಅಧ್ಯಕ್ಷ ಶಶಿಧರ ಪಾಟೀಲ ಮನವಿ ಮಾಡಿದರು.
ಬುಧವಾರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ಖರೀದಿ ಕೇಂದ್ರ ಉದ್ಘಾಟಿಸಿ ಮಾತನಾಡಿ, ‘ಕೇಂದ್ರ ಸರ್ಕಾರ ನಿಗದಿ ಪಡಿಸಿದ ಬೆಂಬಲ ಬೆಲೆ ಪ್ರತಿ ಕ್ವಿಂಟಾಲ್ಗೆ ₹ 5,230 ದರದಲ್ಲಿ ಖರೀದಿ ಮಾಡಲಾಗುತ್ತದೆ. ಪ್ರತಿ ಎಕರೆಗೆ 4 ಕ್ವಿಂಟಾಲ್ದಂತೆ ಒಬ್ಬ ರೈತರಿಂದ ಕನಿಷ್ಠ 15 ಕ್ವಿಂಟಾಲ್ ಮಾತ್ರ ಖರೀದಿಸಲಾಗುತ್ತದೆ’ ಎಂದರು.
‘ಎಫ್ಎಕ್ಯೂ ಗುಣಮಟ್ಟ ಆಧಾರದಲ್ಲಿ ಖರೀದಿಗೆ ನೀಡಲು ರೈತರು ಪಹಣಿ ಪತ್ರಿಕೆ, ಬ್ಯಾಂಕ್ ಪಾಸ್ ಬುಕ್, ಆಧಾರ ಕಾರ್ಡ್ ನಕಲು ಪ್ರತಿ ನೀಡಬೇಕು. ಪಹಣಿ ಪತ್ರಿಕೆಯಲ್ಲಿ ಬೆಳೆ ಕಾಲಂನಲ್ಲಿ ಕಡಲೆ ಬೆಳೆ ಎಂದು ನಮೂದಿಸಿರುವುದು ಕಡ್ಡಾಯ. ಕೃಷಿ ಇಲಾಖೆಯಿಂದ ದೃಢೀಕರಣ ತಂದರು ಕೂಡ ಆನ್ಲೈನ್ದಲ್ಲಿ ನೋಂದಣಿ ಆಗುವುದಿಲ್ಲ’ ಎಂದು ಸಲಹೆ ನೀಡಿದರು.
ತಾಲ್ಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಕ ಶಂಕರ ಪಾಟೀಲ್, ವ್ಯವಸ್ಥಾಪಕ ಮುಸ್ತಾಫ್. ಮುಖಂಡರಾದ ಪಾಮಯ್ಯ ಮುರಾರಿ, ಚೆನ್ನಾರೆಡ್ಡಿ ಬಿರಾದರ, ಸಿದ್ರಾಮಪ್ಪ, ಅನಿತಾ, ಮಂಜುನಾಥ, ಶರಣಬಸವ ಇದ್ದರು.