ಸಿಂಧನೂರು: ಕೃಷಿ ಉತ್ಪನ್ನಗಳ ಕನಿಷ್ಠ ಬೆಂಬಲ ಬೆಲೆ ಕಾಯ್ದೆಯನ್ನು ರಕ್ಷಿಸುವಂತೆ ಒತ್ತಾಯಿಸಿ ಕರ್ನಾಟಕ ರೈತ ಸಂಘ ತಾಲ್ಲೂಕು ಘಟಕ ಬುಧವಾರ ಸ್ಥಳೀಯ ಮಿನಿವಿಧಾನಸೌಧ ಕಚೇರಿ ಮುಂದೆ ಪ್ರತಿಭಟಿಸಿ ಶಿರಸ್ತೇದಾರ್ ವಾಣಿ ಅವರಿಗೆ ಮನವಿ ಪತ್ರ ಸಲ್ಲಿಸಿತು.
ಎಂ.ಎಸ್. ಸ್ವಾಮಿನಾಥನ್ ಆಯೋಗದ ವರದಿ ಜಾರಿಗೊಳಿಸಬೇಕು ಮತ್ತು ಕನಿಷ್ಠ ಬೆಂಬಲ ಬೆಲೆ ಕಾನೂನನ್ನು ಹೊಸ ಕೃಷಿ ಕಾಯ್ದೆಯಲ್ಲಿ ಸೇರ್ಪಡೆ ಮಾಡಬೇಕು. ರೈತರ ಕೃಷಿ ಉತ್ಪನ್ನಗಳನ್ನು ಖರೀದಿಸುವ ಯಾವುದೇ ಕಂಪನಿ ಮತ್ತು ಖಾಸಗಿ ಖರೀದಿದಾರರು ಕನಿಷ್ಠ ಬೆಂಬಲ ಬೆಲೆಯ ಷರತನ್ನು ಉಲ್ಲಂಘಿಸದಂತೆ ಕಟ್ಟು ನಿಟ್ಟಿನ ಕಾನೂನುಗಳನ್ನು ಅಳವಡಿಸಬೇಕು.
ಆಹಾರ ಸಂಗ್ರಹ ಮತ್ತು ವಿತರಣೆಯಲ್ಲಿ ಕಾನೂನು ಉಲ್ಲಂಘನೆ ಆಗದಂತೆ ಎಚ್ಚರ ವಹಿಸಬೇಕು. ಶಿಕ್ಷಾರ್ಹ ಅಪರಾಧ ಎಸುಗುವವರನ್ನು ಬಂಧಿಸಬೇಕು. ರಾಜ್ಯದ ಪ್ರತಿಯೊಂದು ಗ್ರಾಮ ಪಂಚಾಯಿತಿಗೊಂದು ಸರ್ಕಾರಿ ಖರೀದಿ ಕೇಂದ್ರ ತೆರದು, ಸಜ್ಜೆ, ಮೆಕ್ಕೆಜೋಳ, ಸೂರ್ಯಕಾಂತಿ, ಹೈಬ್ರಿಡ್ ಜೋಳ, ಭತ್ತ ಇತರೆ ಕೃಷಿ ಉತ್ಪನ್ನಗಳನ್ನು ಖರೀದಿಸಿ ರೈತರ ನೆರವಿಗೆ ಧಾವಿಸಬೇಕೆಂದು ಆರ್ವೈಎಫ್ ನಾಗರಾಜ್ ಪೂಜಾರ್ ಆಗ್ರಹಿಸಿದರು.
ನಿರಂತರ ತೀವ್ರ ಮಳೆಯಿಂದ ರೈತರು ಬೆಳೆದ ಈರುಳ್ಳಿ ಇತರೆ ಬೆಳೆಗಳು ಸಂಪೂರ್ಣ ನಷ್ಟಗೊಂಡಿವೆ. ಹಾಗಾಗಿ ರೈತರ ಪ್ರತಿ ಎಕರೆಗೆ ₹ 30 ಸಾವಿರ ಪರಿಹಾರ ಕೊಡಬೇಕು. ಬ್ಯಾಂಕ್ಗಳ ರೈತರ ಸಾಲಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.
ಫಸಲ್ ಭಿಮಾ ಯೋಜನೆಯ ವಿಮೆಯ ಬಾಕಿ ಹಣವನ್ನು ಮಂಜೂರು ಮಾಡಬೇಕು. ಲಾಕ್ಡೌನ್ ಸಂದರ್ಭದಲ್ಲಿ ಹೂವು, ಹಣ್ಣು, ತರಕಾರಿ, ತೋಟಗಾರಿಕೆ ಇತರೆ ಬೆಳೆಯಲ್ಲಿ ನಷ್ಟ ಅನುಭವಿಸಿದ ರೈತರಿಗೆ ಸರ್ಕಾರ ಘೋಷಿಸಿದ ಪರಿಹಾರ ಹಣವನ್ನು ಒದಗಿಸಬೇಕೆಂದು ಕೆಆರ್ಎಸ್ ಅಧ್ಯಕ್ಷ ರಮೇಶ ಪಾಟೀಲ್ ಒತ್ತಾಯಿಸಿದರು.
ಸಂಘದ ಕಾರ್ಯದರ್ಶಿ ಬಸವರಾಜ ಬೆಳಗುರ್ಕಿ, ಸದಸ್ಯರಾದ ಚಿಟ್ಟಿಬಾಬು, ಬಿ.ಎನ್.ಯರದಿಹಾಳ, ಶ್ರೀನಿವಾರ ಬುಕನಹಟ್ಟಿ, ರಮೇಶ, ಬಸವರಾಜ, ಶಿವಕುಮಾರ, ಯಲ್ಲಮ್ಮ, ಲಕ್ಷ್ಮಣ, ಅಮರೇಶ ನಾಯಕ, ಮೌನೇಶ ಗೌಡಗವಿ, ರಮೇಶ ಜಲಾಲವಾಡಿ, ಆಂಜನೇಯ ಮೋತಿ, ಮಂಜುನಾಥ, ಚಂದ್ರಶೇಖರ, ಬಸವರಾಜ, ದುರುಗಪ್ಪ ಹಾಗೂ ಇತರರು ಇದ್ದರು.