ರಾಯಚೂರು: ತುಂಗಭದ್ರಾ ನದಿಯಲ್ಲಿ ಪುಷ್ಕರ ಪುಣ್ಯ ಸ್ನಾನ ಆರಂಭವಾಗಿದೆ. ಮಂತ್ರಾಲಯದಲ್ಲಿ ಶ್ರೀ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ನದಿಯಲ್ಲಿ ಕಳಸೋದಕ ಪೂಜೆ ನೆರವೇರಸಿ, ನದಿಯಲ್ಲಿ ಮಿಂದು ಪುಷ್ಕರ ಸ್ನಾನಕ್ಕೆ ಚಾಲನೆ ನೀಡಿದರು.
ಗಂಗಾ, ಯಮುನಾ, ಗೋಧಾವರಿ, ಸರಸ್ವತಿ, ನರ್ಮದಾ, ಸಿಂಧು, ಕಾವೇರಿ ಏಳು ನದಿಗಳ ನೀರನ್ನು ಒಂದೇ ಕಳಸದಲ್ಲಿಟ್ಟು ಪೂಜೆ ಸಲ್ಲಿಸಿ ತುಂಗಭದ್ರಾ ನದಿಗೆ ಸಮರ್ಪಿಸಿದರು.
ಭಕ್ತರು ವಿವಿಧೆಡೆಯಿಂದ ಮಂತ್ರಾಲಯಕ್ಕೆ ಬರುತ್ತಿದ್ದು, ತುಂಗಭದ್ರಾ ಸ್ನಾನ ಮಾಡಿ ಪುಣೀತರಾಗುತ್ತಿದ್ದಾರೆ. ಶ್ರಾದ್ಧ, ಪಿಂಡ ಪ್ರದಾನ, ತರ್ಪಣ ಬಿಡುವ ವಿಧಿವಿಧಾನಗಳನ್ನು ಜನರು ನೆರವೇರಿಸುತ್ತಿದ್ದಾರೆ.
ನದಿಯುದ್ದಕ್ಕೂ ಪುರೋಹಿತರು ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸುತ್ತಿದ್ದಾರೆ. ಕರ್ನೂಲ್ ಪೊಲೀಸರು ಕಟ್ಟೆಚ್ಚರ ವಹಿಸಿದ್ದು, ಜನದಟ್ಟಣೆ ಆಗದಂತೆ ಕ್ರಮ ವಹಿಸಿದ್ದಾರೆ.