ರಾಯಚೂರು: ನಗರದಲ್ಲಿ ಬೆರಳೆಣಿಕೆಯಷ್ಟು ಆಧಾರ ಸೇವಾ ಕೇಂದ್ರಗಳಿದ್ದು, ಆಧಾರ ಮಾಡಿಸಿಕೊಳ್ಳಲು ಜನರು ಪರದಾಡುವಂತಾಗಿದೆ. ಆದ್ದರಿಂದ ಹೆಚ್ಚುವರಿ ಆಧಾರ್ ಸೇವಾ ಕೇಂದ್ರಗಳನ್ನು ಆರಂಭಿಸಬೇಕು ಎಂದು ಆಗ್ರಹಿಸಿ ಜೈ ಕರ್ನಾಟಕ ರಕ್ಷಣಾ ವೇದಿಕೆ ಸದಸ್ಯರು ಜಿಲ್ಲಾಧಿಕಾರಿಗೆ ಸೋಮವಾರ ಮನವಿ ಸಲ್ಲಿಸಿದರು.
ಕೆಲವು ಕಡೆ ಆಧಾರ್ ಅಗತ್ಯವಿಲ್ಲ ಎಂದು ಹೇಳಿದರೆ, ಇನ್ನು ಕೆಲಕಡೆ ಆಧಾರ ಕಡ್ಡಾಯವೆಂದು ಹೇಳಲಾಗುತ್ತಿದೆ. ಸರ್ಕಾರದ ಇಬ್ಬಗೆ ನೀತಿಯಿಂದ ಜನರಿಗೆ ತೊಂದರೆಯಾಗಿದೆ. ಹಳ್ಳಿಗಳಿಂದ ಬರುವ ಜನರು ಆಧಾರ ಸೌಲಭ್ಯವನ್ನು ಪಡೆಯಲು ಕೆಲಸವಾಗದೇ ವಾಪಸು ಹೋಗುತ್ತಿದ್ದಾರೆ. ಅನಕ್ಷರಸ್ಥರು ಆಧಾರ ಪಡೆಯಲು ಹಲವು ಬಾರಿ ಅಲೆದಾಡುವಂತಾಗಿದೆ. ಕೂಲಿ ಕೆಲಸ ಬಿಟ್ಟು ಬಂದರೂ ಆಧಾರ ಪಡೆಯಲಾಗದೇ ತೊಂದರೆ ಪಡುವಂತಾಗಿದೆ ಎಂದು ದೂರಿದರು.
ಆದ್ದರಿಂದ ಎಲ್ಲ ಗ್ರಾಮಗಳಲ್ಲಿ ಆಧಾರ್ ಸೇವಾ ಕೇಂದ್ರಗಳ ಬಗ್ಗೆ ಹಾಗೂ ಆಧಾರಗೆ ಬೇಕಾದ ದಾಖಲೆಗಳ ಬಗ್ಗೆ ಅರಿವು ಮೂಡಿಸಬೇಕು. ಎಲ್ಲ ಬ್ಯಾಂಕುಗಳಲ್ಲಿ ಹಾಗೂ ಸಹಕಾರ ಸಂಘಗಳಲ್ಲಿ ಈ ಸೌಲಭ್ಯ ಆರಂಭಿಸಿ ಜನರಿಗೆ ಅನುಕೂಲ ಮಾಡಬೇಕು. ಈ ಮೂಲಕ ಜನರಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸಬೇಕು ಎಂದು ಒತ್ತಾಯಿಸಿದರು.
ಸಂಘಟನೆ ಜಿಲ್ಲಾ ಘಟಕ ಅಧ್ಯಕ್ಷ ಅಶೋಕಶೆಟ್ಟಿ, ಸಿದ್ರಾಮ ಸಿಂಧೆ, ಶರಣಪ್ಪ, ಚನ್ನಬಸವ, ಮಾರಪ್ಪ, ಸುನೀಲ ಕುಮಾರ ಇದ್ದರು.