ರಾಯಚೂರು: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಅವರು ಮೊಟ್ಟೆ ಖರೀದಿಯಲ್ಲಿ ಭಾರೀ ಭ್ರಷ್ಟಾಚಾರ ನಡೆಸಿದ್ದು ಕೂಡಲೇ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಭಾರತ ಕಮ್ಯೂನಿಸ್ಟ್ ಪಕ್ಷ (ಸಿಪಿಐಎಂ) ಜಿಲ್ಲಾ ಘಟಕದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿ ಆನಂತರ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಗಂಗಾವತಿ ಶಾಸಕ ಪರಮಣ್ಣ ಮುನವಳ್ಳಿ ಅವರು ಸೇರಿ ಕಲ್ಯಾಣ ಕರ್ನಾಟಕ ಭಾಗದ 6 ಜಿಲ್ಲೆಗಳ ಅಂಗನವಾಡಿ ಕೇಂದ್ರಗಳಿಗೆ ವಿತರಿಸುವ ಮೊಟ್ಟೆಯ ಟೆಂಡರ್ ನೀಡಲು ಕಮಿಷನ್ ನೀಡುವಂತೆ ಗುತ್ತಿಗೆದಾರರಿಗೆ ಕೇಳಿದ್ದು ಮಾಧ್ಯಮಗಳಲ್ಲಿ ವರದಿ ಮಾಡಿದ್ದು ಬಹಿರಂಗವಾಗಿದೆ.
ಅಂಗನವಾಡಿಗಳಿಗೆ ಪ್ರತಿ ತಿಂಗಳು ಪೂರೈಕೆಯಾಗುವ ಮೊಟ್ಟೆಗಳು ಚಿಕ್ಕ ಗಾತ್ರದಲ್ಲಿದ್ದು ಇಲ್ಲಿಯೂ ಭ್ರಷ್ಟಾಚಾರ ನಡೆಯುವ ಬಗ್ಗೆ ಅನುಮಾನಗಳಿದ್ದು ಸ್ವತಂತ್ರವಾಗಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಪಕ್ಷದ ಮುಖಂಡ ಕೆ.ಜಿ.ವೀರೇಶ, ಮಲ್ಲಯ್ಯ ಮಂಡಲಗೇರ, ತಾಯಮ್ಮ, ಖಾಜಮ್ಮ, ಸಂತೋಶಮ್ಮ, ರಾಮಣ್ಣ, ಜಯಲಕ್ಷ್ಮೀ ಇದ್ದರು.