ರಾಯಚೂರು: ರಾಯಚೂರು ನಗರ ವಿಧಾನಸಭಾ ಕ್ಷೇತ್ರದಲ್ಲಿ ಮುಸ್ಲಿಂ ಅಭ್ಯರ್ಥಿಯನ್ನೇ ಸ್ಪರ್ಧಿಸಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿ ಅಂಜುಮನ್ ಎ–ರಾಯಚೂರು ಸಂಘಟನೆಯಿಂದ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಬುಧವಾರ ಪ್ರತಿಭಟನೆ ನಡೆಸಲಾಯಿತು.
1956ರ ರಿಂದ ಇಲ್ಲಿಯವರೆಗೆ ಕಾಂಗ್ರೆಸ್ ಪಕ್ಷವು ಮುಸ್ಲಿಂ ಸಮುದಾಯಕ್ಕೆ ಸ್ಪರ್ಧಿಸಲು ಅವಕಾಶ ನೀಡುತ್ತ ಬಂದಿದೆ. ಬಹುತೇಕ ಮುಸ್ಲಿಂಮರು ಜಾತ್ಯತೀತ ಮನೋಭಾವನೆಯಿಂದ ಕಾಂಗ್ರೆಸ್ ಪಕ್ಷವನ್ನೇ ಬೆಂಬಲಿಸುತ್ತ ಬಂದಿದ್ದಾರೆ. ರಾಯಚೂರು ನಗರ ವಿಧಾನಸಭಾ ಕ್ಷೇತ್ರದಲ್ಲಿ 2021ರ ಮತದಾರರ ಪಟ್ಟಿಯಂತೆ ಸುಮಾರು 89 ಸಾವಿರ ಮುಸ್ಲಿಂ ಮತದಾರರಿದ್ದು, ಬಹುತೇಕ ಸಂದರ್ಭದಲ್ಲಿ ಮುಸ್ಲಿಮರು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸುತ್ತ ಬಂದಿದ್ದಾರೆ ಎಂದರು.
ರಾಯಚೂರು ನಗರದಲ್ಲಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮುಸಲ್ಮಾನರಿಗೆ ಟಿಕೇಟ್ ಸಿಗುವದಿಲ್ಲ ಎಂದು ಕೆಲವು ಪಟ್ಟಭದ್ರ ಹಿತಾಸಕ್ತ ವ್ಯಕ್ತಿಗಳು ಪ್ರಚಾರ ಮಾಡುತ್ತಿರುವುದು ಸಮುದಾಯದ ಆತಂಕಕ್ಕೆ ಕಾರಣವಾಗಿದೆ. ಸಮುದಾಯದ ಭಾವನೆಗಳಿಗೆ ಧಕ್ಕೆ ಬರುವಂತಾಗಿದೆ ಎಂದು ಹೇಳಿದರು.
ಮುಖಂಡರಾದ ರಝಾಕ್ ಉಸ್ತಾದ್, ಎಂ.ಕೆ.ಬಾಬರ್, ಹ್ಯಾರಿಸ್ ಸಿದ್ದೀಖಿ, ಅಬ್ದುಲ್ ಹೈ ಫೆರೋಜ್, ಶಾಹಾಜಾನ ಅನ್ಸಾರಿ, ಸೈಯದ ಖೈಸರ್ ಹುಸೇನಿ, ಶೇಖ್ ಮಾಸೂಮ ಮಹಿಬೂಬಅಲಿ, ಫೈಜಲ್ ಖಾನ್ ಮೊಹಮ್ಮದ ಅಲಿ ಇದ್ದರು. ಎಐಸಿಸಿ ಹಾಗೂ ಕೆಪಿಸಿಸಿ ಮುಖಂಡರಿಗೆ ಮನವಿ ರವಾನಿಸಲಾಯಿತು.