ಅರಕೇರಾ (ರಾಯಚೂರು ಜಿಲ್ಲೆ): ಗ್ರಾಮವಾಸ್ತವ್ಯಕ್ಕಾಗಿ ಬಂದಿರುವ ಕಂದಾಯ ಸಚಿವ ಆರ್.ಅಶೋಕ್ ಅವರು ಅರಕೇರಾ ಗ್ರಾಮದ ಹಿರೇಮಠ ಆವರಣದಲ್ಲಿ ಶನಿವಾರ ಗ್ರಾಮಸಭೆ ನಡೆಸಿದರು.
ಅರಕೇರಾದಲ್ಲಿ ಒಳಚರಂಡಿ ವ್ಯವಸ್ಥೆ ಮಾಡಿಸಬೇಕು. ಸರ್ಕಾರಿ ಪದವಿ ಕಾಲೇಜು ಸ್ಥಾಪಿಸಬೇಕು. ಶಾದಿಮಹಲ್ ಮಾಡಿಕೊಡಬೇಕು. ವೀರಶೈವ, ನಾಯಕ ಮತ್ತು ಮುಸ್ಲಿಂ ಸಮುದಾಯಗಳಿಗೆ ಸ್ಮಶಾನಕ್ಕೆ ಭೂಮಿ ಒದಗಿಸಬೇಕು. ಪದವಿಪೂರ್ವ ಕಾಲೇಜಿನಲ್ಲಿ ಎಲ್ಲ ಜಾತಿ ಬಡವರಿಗೆ ಉಚಿತ ಪುಸ್ತಕ ಕೊಡಬೇಕು ಹಾಗೂ ಆದರ್ಶ ವಿದ್ಯಾಲಯಕ್ಕೆ ಶಾಲಾವಾಹನ ಒದಗಿಸಿ ಎಂದು ಗ್ರಾಮಸ್ಥರು ಸಚಿವರ ಎದುರು ಬೇಡಿಕೆಗಳನ್ನು ಸಲ್ಲಿಸಿದರು.
ಸಚಿವರು ಮಾತನಾಡಿ, ಗ್ರಾಮದ ಅಭಿವೃದ್ಧಿಗಾಗಿ ಈಗಾಗಲೇ ₹1 ಕೋಟಿ ಅನುದಾನ ಬಿಡುಗಡೆ ಮಾಡಿದ್ದು, ಅದು ಜಿಲ್ಲಾಡಳಿತದಲ್ಲಿದೆ. ವೀರಶೈವ ಸಮಾಜ ಹಾಗೂ ನಾಯಕ ಸಮುದಾಯಗಳಿಗೆ ಸ್ಮಶಾನಕ್ಕಾಗಿ ನಾಲ್ಕು ಎಕರೆ ಜಮೀನು ಶೀಘ್ರ ಮಂಜೂರಿ ಮಾಡಲಾಗುವುದು ಎಂದು ತಿಳಿಸಿದರು.