ಶಕ್ತಿನಗರ: ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರ (ಆರ್ಟಿಪಿಎಸ್)ದ ಘಟಕಗಳಿಂದ ಹೊರಬರುವ ಹಸಿ ಹಾರುಬೂದಿಯು ಹೊಂಡದಿಂದ ನೇರವಾಗಿ ಕೃಷ್ಣಾನದಿಗೆ ಸೇರಿ ನೀರನ್ನು ಕಲುಷಿತಗೊಳ್ಳುತ್ತಿದೆ.
ಜೀವಜಲವಾದ ನದಿಯಲ್ಲಿರುವ ಎಲ್ಲ ಜೀವಗಳಿಗೂ ಕಂಟಕವಾಗಿ ಪರಿಣಮಿಸಿದೆ.ಮಳೆಗಾಲದಲ್ಲಿ ಮಾತ್ರ ನದಿಯು ಮೈದುಂಬಿ ಹರಿಯುತ್ತದೆ. ಬೇಸಿಗೆಯ ಮೂರು ತಿಂಗಳು ನೀರು ಹರಿಯುವುದಿಲ್ಲ. ಹಾರುಬೂದಿ ನದಿಗೆ ಈಗಲೂ ಹರಿ ಬಿಡಲಾಗುತ್ತಿದೆ. ನದಿ ಪಾತ್ರದ ಗ್ರಾಮಗಳ ಜನರು ಇದೇ ನೀರನ್ನು ಕುಡಿಯಲು ಬಳಸುತ್ತಿದ್ದು, ಆರೋಗ್ಯದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.
ಕರ್ನಾಟಕ ವಿದ್ಯುತ್ ನಿಗಮದ ವ್ಯವಸ್ಥಾಪಕ ನಿರ್ದೇಶಕ ವಿ.ಪೊನ್ನುರಾಜ ಅವರು ಈಚೆಗೆ ಶಕ್ತಿನಗರಕ್ಕೆ ಭೇಟಿ ನೀಡಿದಾಗ, ಹಾರುಬೂದಿ ಹೊಂಡದಿಂದ ನೀರು ಬಿಡದಂತೆ ಎಚ್ಚರ ವಹಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ನದಿ ಕಲುಷಿತವಾಗುವುದನ್ನು ತಡೆಯಲು ಅಧಿಕಾರಿಗಳು ಯಾವ ಕ್ರಮವೂ ಆಗಿಲ್ಲ ಎಂದು ಆರೋಪ ಕೇಳಿ ಬಂದಿದೆ.
ಶಕ್ತಿನಗರ, ದೇವಸೂಗೂರು ಲೇಬರ್ ಕಾಲೋನಿ, ಯದ್ಲಾಪುರ ಮತ್ತು ಆರ್ಟಿಪಿಎಸ್ ಕಾಲೊನಿಯ ಜನರಿಗೆ ಇದೇ ನೀರು ಪೂರೈಕೆ ಆಗುತ್ತಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕಾದ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಮೌನ ವಹಿಸಿದ್ದಾರೆ ಎಂದು ಪರಿಸರ ಪ್ರೇಮಿಗಳು ಆರೋಪಿಸುತ್ತಿದ್ದಾರೆ.
‘ಅಧಿಕಾರಿಗಳು ಎಚ್ಚೆತ್ತುಗೊಂಡು, ಹಾರುಬೂದಿ ನದಿಗೆ ಬಿಡದಂತೆ ಕ್ರಮ ಕೈಗೊಳ್ಳಬೇಕು. ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸಬೇಕು’ ಎನ್ನುವ ಒತ್ತಾಯ ಸ್ಥಳೀಯರದ್ದಾಗಿದೆ.