ರಾಯಚೂರು: ಶೂನ್ಯ ನೆರಳಿನ ವಿದ್ಯಮಾನ ವರ್ಷಕ್ಕೆ ಎರಡು ಬಾರಿ ಸಂಭವಿಸಲಿದ್ದು, ಚಟುವಟಿಕೆಗಳ ಮೂಲಕ ಭೂಮಿಯ ಸುತ್ತಳತೆ, ಭೂಮಿಯ ಪರಿಭ್ರಮಣ, ಶೂನ್ಯ ನೆರಳಿನ ಸಮಯ ಹಾಗೂ ಸೂರ್ಯನ ಚಲನೆ ಇತ್ಯಾದಿ ಅಳೆಯಬಹುದು ಎಂದು ಪ್ರಾದೇಶಿಕ ವಿಜ್ಞಾನ ಕೇಂದ್ರದ ಕ್ಯುರೇಟರ್ ಅಜಿತ್ ಕುಮಾರ ತಿಳಿಸಿದರು.
ನಗರದ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಹಾಗೂ ಭಾರತ ಜ್ಞಾನ ವಿಜ್ಞಾನ ಸಮಿತಿಯಿಂದ ಗುರುವಾರ ಆಯೋಜಿಸಿದ್ದ ಶೂನ್ಯ ನೆರಳು ದಿನ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶೂನ್ಯ ನೆರಳಿನ ವಿದ್ಯಮಾನ ವರ್ಷಕ್ಕೆ ಎರಡು ಬಾರಿಸಂಭವಿಸಲಿದ್ದು, ಇದು ರಾಯಚೂರಿನಲ್ಲಿ ಗುರುವಾರ ಸಂಬಭಿಸಿದ್ದು ಪುನಃ ಆಗಸ್ಟ್ 07 ರಂದು ಸಂಭವಿಸಲಿದೆ. ಆದರೆ, ಆಗಸ್ಟ್ ತಿಂಗಳಲ್ಲಿ ಮೋಡ ಕವಿದ ವಾತಾವರಣ ಕಂಡುಬರುವುದರಿಂದ ಮೇ ತಿಂಗಳಲ್ಲಿ ಇದನ್ನು ಸ್ಪಷ್ಟವಾಗಿ ಕಾಣಬಹುದಾಗಿದೆ ಎಂದರು.
ಕೇಂದ್ರದ ಶಿಕ್ಷಣ ಸಹಾಯಕ ವಿದ್ಯಾ ವಿದ್ಯಾರ್ಥಿಗಳಿಗೆ, ಶೂನ್ಯ ನೆರಳು ವಿದ್ಯಮಾನದ ಮಾಹಿತಿಯನ್ನು ನೀಡಿ, ಚಟುವಟಿಕೆಯನ್ನು ಹಮ್ಮಿಕೊಳ್ಳುವ ವಿಧಾನವನ್ನು ವಿವರಿಸಿದರು. ವಿದ್ಯಾರ್ಥಿಗಳು ಚಟುವಟಿಕೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಶೂನ್ಯ ನೆರಳಿನ ಸಮಯವನ್ನು ಕಂಡುಕೊಂಡರು ಹಾಗೂ ಅದನ್ನು ಪ್ರಸ್ತುತಪಡಿಸಿದರು.
ಭಾರತ ವಿಜ್ಞಾನ ಸಮಿತಿಯ ಜಿಲ್ಲಾ ಸಂಚಾಲಕ ಹಫೀಜುಲ್ಲಾ ಮಾತನಾಡಿ, ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಿಂದ ವಿದ್ಯಾರ್ಥಿಗಳಿಗೆ ವಿಜ್ಞಾನ ಕ್ಷೇತ್ರದಲ್ಲಿ ಆಸಕ್ತಿಯ ಹೆಚ್ಚಾಗುತ್ತದೆ. ಈ ನಿಟ್ಟಿನಲ್ಲಿ ವಿಜ್ಞಾನ ಕೇಂದ್ರದ ಪ್ರಯತ್ನ ಶ್ಲಾಘನೀಯವಾಗಿದೆ ಎಂದು ತಿಳಿಸಿದರು.
ಈ ಚಟುವಟಿಕೆಗಳ ಮೂಲಕ ರಾಯಚೂರಿನಲ್ಲಿ ಶೂನ್ಯ ನೆರಳಿನ ಸಮಯ ಮಧ್ಯಾಹ್ನ 12 ಗಂಟೆ 17 ನಿಮಿಷಗಳು ಎಂದು ಪ್ರಾತ್ಯಕ್ಷಿಕೆ ಮೂಲಕ ಕಂಡುಕೊಳ್ಳಲಾಯಿತು.
ಈ ವೇಳೆ ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು ಹಾಗೂ ವಿಜ್ಞಾನ ಕೇಂದ್ರದ ಸಿಬ್ಬಂದಿ ಇದ್ದರು.