ಮಸ್ಕಿ: ವಿದ್ಯಾರ್ಥಿಗಳು ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಬೇಕು. ಸರಳವಾಗಿ ಸುಲಭವಾಗಿ ಗೊತ್ತಿರುವ ಪಾಠಗಳನ್ನು ಅಭ್ಯಸಿಸಬೇಕು. ಕಠಿಣ ಪಾಠಗಳನ್ನು ಸ್ನೇಹಿತರೊಂದಿಗೆ ಚರ್ಚಿಸಬೇಕು. ಚರ್ಚಿಸಿದ್ದನ್ನು ಚಿತ್ರಕತೆಯಂತೆ ನೆನಪಿನಲ್ಲಿಟ್ಟುಕೊಳ್ಳಬೇಕು. ಆಗ ವಿಶ್ವಾಸದಿಂದ ಪರೀಕ್ಷೆ ಎದುರಿಸಲು ಸಾಧ್ಯವಾಗುತ್ತದೆ ಎಂದು ಧಾರವಾಡದ ನಿವೃತ್ತ ಶಿಕ್ಷಕ, ತಜ್ಞ ಸುರೇಶ ಕುಲಕರ್ಣಿ ಸಲಹೆ ನೀಡಿದರು.
ಇಲ್ಲಿನ ಭ್ರಮರಾಂಭ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ 10ನೇ ತರಗತಿ ವಿಧ್ಯಾರ್ಥಿಗಳಿಗೆ ಪರೀಕ್ಷೆ ಎದುರಿಸುವ ಕಲೆ, ಓದಿದ್ದನ್ನು ನೆನಪಿಟ್ಟುಕೊಳ್ಳವ ವಿಧಾನ, ಕಲಿಕೆಯಲ್ಲಿ ಉತ್ಸಾಹ ಉಳಿಕೊಳ್ಳುವ ಮಾರ್ಗೋಪಾಯಗಳು ಮತ್ತಿತರ ವಿಷಯಗಳ ಬಗ್ಗೆ ಮಾಹಿತಿ ನೀಡಿದರು.
ನಮ್ಮ ಮಿದುಳಿನ ನರಮಂಡಲ ಅತ್ಯಂತ ಅದ್ಭುತವಾಗಿದ್ದು ಒಂದು ಸಾವಿರ ಕೋಟಿ ಅದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು ಎಂದು ಹೇಳಿದರು. ದೇಶ ಸದೃಢವಾಗಬೇಕಾದರೆ ಆ ದೇಶದ ಯುವ ಜನತೆ ಸದೃಢರಾಗಿರಬೇಕು. ಇಂದಿನ ಯುವಜನತೆ ಅನವಶ್ಯಕವಾಗಿ ಮೊಬೈಲ್, ವಾಹನ ಮತ್ತು ಹಣದ ಹಿಂದೆ ಬಿದ್ದು ದುಶ್ಚಟಕ್ಕೆ ಬಲಿಯಾಗುತ್ತಿದ್ದಾರೆ. ಪ್ರತಿಯೊಬ್ಬರೂ ಉದಾತ್ತ ಸಂಸ್ಕೃತಿ, ಉದಾತ್ತ ಯೋಚನೆ ಮತ್ತು ಯೋಜನೆ ಹಾಕಿಕೊಂಡಾಗ ಮಾತ್ರ ಬಲಿಷ್ಠ ಭಾರತ ನಿರ್ಮಾಣ ಸಾಧ್ಯ ಎಂದು ಉದಾಹರಣೆ ಸಹಿತ ವಿವರಿಸಿದರು. ಕಾರ್ಯಕ್ರಮವನ್ನು ಮಸ್ಕಿ ಮಲ್ಲಿಕಾರ್ಜುನ ಶಿಕ್ಷಣ ಸಂಸ್ಥೆ ಆಯೋಜಿಸಿತ್ತು.