ಗೌಡಗೆರೆಗೆ ನಟ ಕಿಚ್ಚ ಸುದೀಪ್

ಚನ್ನಪಟ್ಟಣ: ನಟ ಕಿಚ್ಚ ಸುದೀಪ್ ಅವರು ಪತ್ನಿ ಜೊತೆ ತಾಲ್ಲೂಕಿನ ಗೌಡಗೆರೆ ಗ್ರಾಮದ ಶ್ರೀಚಾಮುಂಡೇಶ್ವರಿ ಬಸವಪ್ಪ ಕ್ಷೇತ್ರಕ್ಕೆ ಶುಕ್ರವಾರ ಭೇಟಿ ನೀಡಿ ಚಾಮುಂಡೇಶ್ವರಿ ದೇವಿಯ ಪಂಚಲೋಹ ವಿಗ್ರಹಕ್ಕೆ ಪೂಜೆ ಸಲ್ಲಿಸಿದರು.
ತಮ್ಮ ಹುಟ್ಟುಹಬ್ಬದ ಅಂಗವಾಗಿ ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಪೂಜೆ ಸಲ್ಲಿಸಿದ ಅವರು, ಅಲ್ಲಿಂದ ಗೌಡಗೆರೆ ಗ್ರಾಮಕ್ಕೆ ಆಗಮಿಸಿ ಕ್ಷೇತ್ರದಲ್ಲಿ ಸ್ಥಾಪಿಸಿರುವ ವಿಶ್ವದ ಅತಿ ಎತ್ತರದ ಚಾಮುಂಡೇಶ್ವರಿ ಪಂಚಲೋಹ ವಿಗ್ರಹ ವೀಕ್ಷಿಸಿ ಪೂಜೆ ಸಲ್ಲಿಸಿದರು.
ಕ್ಷೇತ್ರದಲ್ಲಿ ಭೀಮನ ಅಮಾವಾಸ್ಯೆ ದಿನ 65 ಅಡಿ ಎತ್ತರದ ಚಾಮುಂಡೇಶ್ವರಿ ದೇವಿಯ ಪಂಚಲೋಹ ವಿಗ್ರಹ ಅನಾವರಣಗೊಂಡಿತ್ತು. ಈ ವಿಚಾರವನ್ನು ತಮ್ಮ ನಿಕಟವರ್ತಿ ತಾಲ್ಲೂಕಿನ ಯುವ ಮುಖಂಡ ಚಂದು ಕರಿಯಪ್ಪ ಮುಖೇನ ತಿಳಿದುಕೊಂಡ ಸುದೀಪ್ ದಂಪತಿ ಇಲ್ಲಿಗೆ ಬಂದು ದೇವಿಯ ದರ್ಶನ ಮಾಡಿದರು.
ಚಾಮುಂಡೇಶ್ವರಿ ದೇವಿಗೆ ಸಂಪಿಗೆ ಹಾರ ಅರ್ಪಿಸಿದ ಅವರು, ಈಡುಗಾಯಿ ಒಡೆದು ನಮಿಸಿದರು. ಕ್ಷೇತ್ರಕ್ಕೆ ಆಗಮಿಸಿದ ಸುದೀಪ್ ಅವರನ್ನು ಕ್ಷೇತ್ರದ ಧರ್ಮದರ್ಶಿ ಡಾ.ಮಲ್ಲೇಶ್ ಗುರೂಜಿ ಆತ್ಮೀಯವಾಗಿ ಸ್ವಾಗತಿಸಿದರು. ನಂತರ ಶಾಲು ಹೊದಿಸಿ ಸನ್ಮಾನಿಸಿದರು. ಚಾಮುಂಡೇಶ್ವರಿ ದೇವಿಯ ದೊಡ್ಡ ಭಾವಚಿತ್ರ ನೀಡಿ, ಕೃಷ್ಣ ರುಕ್ಮಿಣಿಯ ವಿಗ್ರಹವನ್ನು ನೀಡಿದರು.
ಸುದೀಪ್ ಆಗಮನದ ಸುದ್ದಿ ತಿಳಿದಿದ್ದ ಅಭಿಮಾನಿಗಳು ಕ್ಷೇತ್ರದಲ್ಲಿ ಬೆಳಿಗ್ಗೆಯಿಂದಲೇ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದರು. ಸುರಿಯುತ್ತಿದ್ದ ಜಡಿಮಳೆ ಲೆಕ್ಕಿಸದೇ ಕಾಯ್ದು ಕುಳಿತಿದ್ದ ಅಭಿಮಾನಿಗಳು ಸುದೀಪ್ ಆಗಮಿಸುತ್ತಿದ್ದಂತೆ ಕಿಚ್ಚ... ಕಿಚ್ಚ... ಎಂಬ ಘೋಷಣೆ ಕೂಗಿದರು. ಅಭಿಮಾನಿಗಳಿಗೆ ಸುದೀಪ್ ಕೈ ಮುಗಿದು ಗೌರವ ಸೂಚಿಸಿದರು. ಗ್ರಾಮಾಂತರ ಸರ್ಕಲ್ ಇನ್ಸ್ಪೆಕ್ಟರ್ ಬಿ. ಶಿವಕುಮಾರ್ ಮತ್ತು ಸಿಬ್ಬಂದಿ ಸ್ಥಳದಲ್ಲಿದ್ದು ಸೂಕ್ತ ಬಂದೋಬಸ್ತ್ ಏರ್ಪಡಿಸಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.