ಬಿಡದಿ: ಇಂದಿನ ಯುವ ಜನತೆಗೆ ಉತ್ತಮ ಶಿಕ್ಷಣ ಸಿಗಬೇಕು ಆಗ ಉತ್ತಮ ಸಮಾಜ ನಿರ್ಮಾಣ ಸಾಧ್ಯವಾಗುವುದು ಎಂದು ಆದಿಚುಂಚನಗಿರಿ ಬೆಂಗಳೂರು ಶಾಖಾ ಮಠದ ಕಾರ್ಯದರ್ಶಿ ಸೌಮ್ಯನಾಥ ಸ್ವಾಮೀಜಿ ಹೇಳಿದರು.
ಛತ್ರ ಗ್ರಾಮದ ಬಳಿ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಹೊಸದಾಗಿ ನಿರ್ಮಿಸಿರುವ ಬಿಜಿಎಸ್ ಪಿಯು ಕಾಲೇಜು ಕಟ್ಟಡವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.
‘ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಇಂದಿನ ಯುವ ಪೀಳಿಗೆಗೆ ವಿದ್ಯೆ ಸಿಗಬೇಕು. ವಿದ್ಯೆ ಸಿಕ್ಕಾಗ ಮಾತ್ರ ವಿದ್ಯಾರ್ಥಿಗಳು ಸಮಾಜದಲ್ಲಿ ಬೆಳವಣಿಗೆ ಕಾಣುತ್ತಾರೆ’ ಎಂದರು.
ವಿದ್ಯಾರ್ಥಿಗಳು ಮೊಬೈಲ್ ಗೀಳಿಗೆ ಒಳಗಾಗದೇ ಓದಿನ ಕಡೆ ಗಮನ ಹರಿಸಬೇಕು. ವಿದ್ಯಾರ್ಥಿಗಳು ವಿದ್ಯಾರ್ಜನೆಯ ಸಮಯದಲ್ಲಿ ಅನಗತ್ಯ ವಿಚಾರಗಳಿಗೆ ಮನಸ್ಸು ನೀಡದೆ ಏಕಾಗ್ರತೆಯಿಂದ ಕಷ್ಟ ಪಟ್ಟು ಓದಿದಾಗ ಗುರಿ ತಲುಪಲು ಸಾಧ್ಯ ಎಂದು ಆದಿಚುಂಚನಗಿರಿ ರಾಮನಗರ ಶಾಖಾ ಮಠದ ಅನ್ನದಾನೇಶ್ವರನಾಥ ಸ್ವಾಮೀಜಿ ಕಿವಿಮಾತು ಹೇಳಿದರು.
ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಸಿಇಒ ಡಾ.ಎನ್ ಶಿವರಾಮ್ ರೆಡ್ಡಿ, ಬಿ.ಸಿ.ಮರಿಸ್ವಾಮಯ್ಯ, ಬಾನಂದೂರು ಬಿ ಎನ್ ಗಂಗಾಧರಯ್ಯ, ಚಿಕ್ಕಣ್ಣಯ್ಯ ಭಾಗವಹಿಸಿದ್ದರು.