ತಿಪ್ಪಸಂದ್ರ(ಮಾಗಡಿ): ಭಾರತದ ಮೂಲನಿವಾಸಿಗಳಾದ ಆದಿಜಾಂಬವ ಸಮುದಾಯದವರಿಗೆ ಸರ್ಕಾರಿ ಹೆಚ್ಚಿನ ಸವಲತ್ತು ನೀಡಿ ಮುಖ್ಯವಾಹಿನಿಗೆ ತರುವ ಯತ್ನದಲ್ಲಿ ವಿಫಲವಾಗಿದೆ ಎಂದು ರಾಜ್ಯ ಆದಿಜಾಂಬವ ಸಂಘದ ಮುಖಂಡ ಆರ್.ಲೋಕೇಶ್ ಆರೋಪಿಸಿದರು.
ನೇರಳೆಕೆರೆಯಲ್ಲಿ ಹೋಬಳಿ ಆದಿಜಾಂಬವ ಸಂಘದ ಶಾಖೆ ಉದ್ಘಾಟಿಸಿ ಅವರು ಮಾತನಾಡಿದರು.
ದಲಿತ ಸಮುದಾಯಕ್ಕೆ ನೂರಾರು ಜಾತಿಗಳನ್ನು ಸೇರ್ಪಡೆ ಮಾಡಿರುವ ಸರ್ಕಾರ ಜನಸಂಖ್ಯೆಗೆ ಅನುಗುಣವಾಗಿ ಉದ್ಯೋಗದಲ್ಲಿ ಮೀಸಲಾತಿ ಮತ್ತು ಸರ್ಕಾರಿ ಸವಲತ್ತು ನೀಡದೆ, ಶೋಷಿತ ಸಮುದಾಯದವರ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಿದೆ. ರಾಜ್ಯದಲ್ಲಿ ತೀರಾ ಬಡತನ ಮತ್ತು ಅಸ್ಪೃಶ್ಯತೆಗೆ ಸಿಲುಕಿ ನಲುಗುತ್ತಿರುವ ಆದಿಜಾಂಬವ ಸಮುದಾಯದವರನ್ನು ಸಂಘಟಿಸಿ ಬೃಹತ್ ಹೋರಾಟ ರೂಪಿಸಿ, ಸಂವಿಧಾನದತ್ತ ಸವಲತ್ತು ಪಡೆಯಲು ತಿಳಿವಳಿಕೆ ನೀಡಲಾಗುವುದು ಎಂದರು.
ಜಿಲ್ಲಾ ಆದಿಜಾಂಬದ ಸಂಘದ ಅಧ್ಯಕ್ಷ ದೊಡ್ಡಯ್ಯ ಮಾತನಾಡಿ ರಾಜ್ಯದಲ್ಲಿ ಮೊದಲಿನಿಂದಲೂ ಆದಿಜಾಂಬವ (ಮಾದಿಗ) ಸಮುದಾಯದವರನ್ನು ಕಡೆಗಣಿಸಲಾಗುತ್ತಿದೆ. ದಲಿತರಲ್ಲಿ ಆದಿದ್ರಾವಿಡ ಸಮುದಾಯದವರೆ ಹೆಚ್ಚಿನ ಸವಲತ್ತು ಪಡೆಯುತ್ತಿದ್ದು, ಆದಿಜಾಂಬರನ್ನು ಕಡೆಗಣಿಸಲಾಗಿದೆ. ಹೋಬಳಿ, ಗ್ರಾಮಗಳಲ್ಲಿ ಸಂಘದ ಶಾಖೆಗಳನ್ನು ಆರಂಭಿಸಿ, ಆದಿಜಾಂಬವರಲ್ಲಿ ಅರಿವು ಮೂಡಿಸಲಾಗುವುದು ಎಂದರು.
ಹೋಬಳಿ ಘಟಕದ ಅಧ್ಯಕ್ಷ ತಾವರೆಕೆರೆ ಸ್ವಾಮಿ, ಸಂಚಾಲಕ ಹೆಬ್ಬಳಲು ಹನುಮಂತಯ್ಯ, ಉಪಾಧ್ಯಕ್ಷ ಮಾಯಸಂದ್ರ ಚೇತನ್ ಕುಮಾರ್, ಕಾರ್ಯದರ್ಶಿ ಗೊರವನಹಳ್ಳಿ ಕುಮಾರ್, ಖಜಾಂಚಿ ತಾವರೆಕೆರೆ ವಿಜಯ ಇದ್ದರು.