ರಾಮನಗರ: ಬಂಡೆ ಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆಗೆ ಬ್ಲ್ಯಾಕ್ಮೇಲ್ ತಂತ್ರವೇ ಕಾರಣ ಎಂಬ ಅಂಶ ತನಿಖೆಯಲ್ಲಿ ಬಯಲಾಗಿದ್ದು, ನಾಲ್ವರು ಆರೋಪಿಗಳ ವಿರುದ್ಧ ಮಾಗಡಿ ಜೆಎಂಎಫ್ ನ್ಯಾಯಾಲಯಕ್ಕೆ ಪೊಲೀಸರು ಗುರುವಾರ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.
ಮಾಗಡಿ ತಾಲ್ಲೂಕಿನ ಕಂಚುಗಲ್ ಬಂಡೆ ಮಠದ ಬಸವಲಿಂಗ ಸ್ವಾಮೀಜಿ (45) ಅ. 24ರಂದು ತಮ್ಮ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.
ಸ್ಥಳದಲ್ಲಿ ದೊರೆತ ಮೂರು ಡೆತ್ನೋಟ್ಗಳಲ್ಲಿ ಸ್ವಾಮೀಜಿ ನೇರವಾಗಿ ಯಾರ ಹೆಸರನ್ನೂ ಉಲ್ಲೇಖಿಸಿಲ್ಲ. ಸ್ವಾಮೀಜಿ ತೇಜೋವಧೆಯೇ ಈ ಸಂಚಿನ ಮುಖ್ಯ ಉದ್ದೇಶ ಆಗಿತ್ತು. ಹಣಕ್ಕಾಗಿ ಈ ಕೃತ್ಯ ನಡೆದಿಲ್ಲ ಎಂದು ಚಾರ್ಜ್ಶೀಟ್ನಲ್ಲಿ ಹೇಳಲಾಗಿದೆ.
ಒಂದೂವರೆ ತಿಂಗಳಲ್ಲಿ ತನಿಖೆ ಪೂರ್ಣಗೊಳಿಸಿದ ಪೊಲೀಸರು ನ್ಯಾಯಾಲಯಕ್ಕೆ 216 ಪುಟಗಳ ಚಾರ್ಜ್ಶೀಟ್ ಸಲ್ಲಿಸಿದ್ದಾರೆ. ಒಟ್ಟು 72 ಸಾಕ್ಷಿಗಳ ಹೇಳಿಕೆ ದಾಖಲಿಸಿದ್ದಾರೆ.
ಆರೋಪಿಗಳಾದ ಕಣ್ಣೂರು ಮಠದ ಮೃತ್ಯುಂಜಯ ಸ್ವಾಮೀಜಿ, ಎಂಜಿನಿಯರಿಂಗ್ ವಿದ್ಯಾರ್ಥಿನಿ ನೀಲಾಂಬಿಕೆ ಹಾಗೂ ವಕೀಲ ಮಹದೇವಯ್ಯ ಸದ್ಯ ನ್ಯಾಯಾಂಗ ವಶದಲ್ಲಿದ್ದಾರೆ.
ನಾಲ್ಕನೇ ಆರೋಪಿ, ಸಿದ್ಧಗಂಗಾ ಮಠದ ಎಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಪ್ರಾಧ್ಯಾ ಪಕ ಸುರೇಶ್ ತಲೆಮರೆಸಿಕೊಂಡಿದ್ದಾರೆ.
ಯುವತಿಯೊಂದಿಗೆ ಸಂಭಾ ಷಣೆ ನಡೆಸಿದ ವಿಡಿಯೊ ಸಿ.ಡಿ ಬಹಿರಂಗಗೊಂಡ ಕಾರಣ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಮಾಡಿ ಕೊಂಡಿದ್ದರು. ಸ್ಥಳದಲ್ಲಿ ದೊರೆತ ಮೂರು ಡೆತ್ನೋಟ್ಗಳನ್ನು ಸಾಕ್ಷ್ಯಗಳನ್ನಾಗಿ ಪರಿಗಣಿಸಲಾಗಿದೆ. ಭಕ್ತರು ಮತ್ತು ಪೊಲೀಸರಿಗೆ ಎರಡು ಪ್ರತ್ಯೇಕ ಡೆತ್ನೋಟ್ಗಳನ್ನು ಅವರು ಬರೆದಿದ್ದಾರೆ. ಅರ್ಧ ಬರೆದು ಎಸೆದ ಮತ್ತೊಂದು ಹಾಳೆ ಸ್ಥಳದಲ್ಲಿ ಸಿಕ್ಕಿದೆ.