ಚನ್ನಪಟ್ಟಣ: ಸಾರ್ವಜನಿಕರ ತೆರಿಗೆ ಹಣವನ್ನು ಸರ್ಕಾರ ಶಿಕ್ಷಣ, ಆರೋಗ್ಯ, ಮೂಲ ಸೌಕರ್ಯ ಹಾಗೂ ಅಭಿವೃದ್ಧಿಗೆ ಬಳಸಬೇಕು ಎಂದು ಜನಪದ ವಿದ್ವಾಂಸ ಡಾ.ಕಾಳೇಗೌಡ ನಾಗವಾರ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಕೆಂಗಲ್ ಬಳಿಯ ಕುವೆಂಪು ಪ್ರಥಮ ದರ್ಜೆ ಕಾಲೇಜು ಮತ್ತು ಕನ್ನಡ ಅಧ್ಯಯನ ಕೇಂದ್ರದಿಂದ ಸೋಮವಾರ ನಡೆದ ಉಪನ್ಯಾಸದಲ್ಲಿ ಮಾತನಾಡಿದರು.
‘ನಾವು ಸಂವಿಧಾನದ ಅಡಿಯಲ್ಲಿ ಜೀವಿಸುತ್ತಿದ್ದೇವೆ. ಸಾರ್ವಜನಿಕರ ತೆರಿಗೆ ಹಣದಿಂದ ಜ್ಞಾನಾರ್ಜನೆಗಾಗಿ ಶಾಲೆಗಳನ್ನು ಕಟ್ಟಬೇಕು. ಆರೋಗ್ಯಕ್ಕಾಗಿ ಆಸ್ಪತ್ರೆಗಳನ್ನು ನಿರ್ಮಿಸಬೇಕು. ಜನರ ಮತ್ತು ಸಮಾಜದ ಅಭಿವೃದ್ಧಿಗೆ ಬಳಸಬೇಕು. ಸಾರ್ವಜನಿಕರ ಹಣವನ್ನು ದೇವಸ್ಥಾನ ಕಟ್ಟಲು, ಧರ್ಮದ ಕೆಲಸಗಳಿಗೆ ಬಳಸುವುದು ಸೂಕ್ತವಲ್ಲ’ ಎಂದರು.
ವಿದ್ಯಾರ್ಥಿಗಳು ಸಾಹಿತ್ಯದ ಎಲ್ಲ ಪ್ರಕಾರಗಳನ್ನು ಓದಿಕೊಳ್ಳಬೇಕು. ಅಸ್ಪೃಶ್ಯತೆ ಆಚರಿಸಬಾರದು. ಕನ್ನಡದ ಶ್ರೇಷ್ಠ ಕೃತಿಗಳನ್ನು ಅಭ್ಯಾಸ ಮಾಡಬೇಕು. ಮಹಾತ್ಮರ ಜೀವನ ಅರಿತುಕೊಳ್ಳಬೇಕು. ಸಾಹಿತ್ಯ ಮತ್ತು ಸಂಸ್ಕೃತಿಗಳ ನಡುವಿನ ಅರ್ಥ ತಿಳಿದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಜನಪದ ಗಾಯಕ ಅಪ್ಪಗೆರೆ ತಿಮ್ಮರಾಜು, ಜನಪದ ಗೀತೆ ಹಾಡಿದರು. ಪ್ರಾಂಶುಪಾಲ ದೊಡ್ಡಸಿದ್ದಯ್ಯ ಮಾತನಾಡಿದರು.
ನಿವೃತ್ತ ಕೆಎಎಸ್ ಅಧಿಕಾರಿ ರುದ್ರಪ್ಪ, ಪತ್ರಕರ್ತ ಗೋ.ರಾ.ಶ್ರೀನಿವಾಸ, ಐಟಿಐ ಕಾಲೇಜು ಪ್ರಾಂಶುಪಾಲ ಶಂಕರಲಿಂಗೇ ಗೌಡ, ವಿದ್ಯಾಸಂಸ್ಥೆ ಅಧೀಕ್ಷಕ ಜಯರಾಮು, ಸಹಾಯಕ ಪ್ರಾಧ್ಯಾಪಕ ರವೀಂದ್ರ, ತೇಜಾವತಿ, ಚಂದ್ರು, ಸುಮಾ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.