ಚನ್ನಪಟ್ಟಣ: ಸರೋಜಿನಿ ಮಹಿಷಿ ವರದಿ ಜಾರಿಗೆ ಒತ್ತಾಯಿಸಿ ವಿವಿಧ ಸಂಘಟನೆಗಳು ಗುರುವಾರ ಕರೆಕೊಟ್ಟಿದ್ದ ಕರ್ನಾಟಕ ಬಂದ್ ಚನ್ನಪಟ್ಟಣದಲ್ಲಿ ಸಂಪೂರ್ಣ ವಿಫಲವಾಯಿತು.
ಬಂದ್ ಸೂಚನೆಯೇ ಇಲ್ಲದಂತೆ ಪಟ್ಟಣದಾದ್ಯಂತ ಅಂಗಡಿ ಮುಂಗಟ್ಟುಗಳು, ಪೆಟ್ರೋಲ್ ಬಂಕ್ ಗಳು, ಚಿತ್ರಮಂದಿರಗಳು, ಬ್ಯಾಂಕುಗಳು, ಅಂಚೆ ಕಚೇರಿ, ಕಾರ್ಖಾನೆಗಳು, ಹೋಟೆಲ್ ಗಳು, ಶಾಲಾ ಕಾಲೇಜುಗಳು ಎಂದಿನಂತೆ ಕಾರ್ಯನಿರ್ವಹಿಸಿದವು.
ಸರ್ಕಾರಿ ಬಸ್ ಗಳು, ಖಾಸಗಿ ಬಸ್ ಗಳು, ಆಟೋಗಳು, ಆಪೆ ಆಟೋಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ಎಂ.ಜಿ.ರಸ್ತೆ, ಜೆ.ಸಿ.ರಸ್ತೆ, ರೈಲ್ವೆ ನಿಲ್ದಾಣ ರಸ್ತೆ, ಪೇಟೆ ಬೀದಿ, ಅಂಚೆಕಚೇರಿ ರಸ್ತೆಯಲ್ಲಿ ಜನಸಂಚಾರ ಎಂದಿನಂತಿತ್ತು.
ರೇಷ್ಮೆ ಮಾರುಕಟ್ಟೆ, ಸರ್ಕಾರಿ ಕಚೇರಿಗಳು ಕಾರ್ಯನಿರ್ವಹಿಸಿದವು. ಸರ್ಕಾರಿ ಆಸ್ಪತ್ರೆ, ಖಾಸಗಿ ಆಸ್ಪತ್ರೆಗಳು, ಔಷಧಿ ಅಂಗಡಿಗಳು ಎಂದಿನಂತೆ ತೆರೆದಿದ್ದವು.
ವಿಜಯ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ನೇಗಿಲಯೋಗಿ ಸಾಂಸ್ಕೃತಿಕ ಟ್ರಸ್ಟ್ ಪದಾಧಿಕಾರಿಗಳು ಪಟ್ಟಣದ ಗಾಂಧಿಭವನದ ಎದುರು ಇರುವ ಕುವೆಂಪು ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ತಾಲ್ಲೂಕು ಕಚೇರಿವರೆಗೆ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ನಂತರ ತಹಶೀಲ್ದಾರ್ ಅವರಿಗೆ ಮನವಿ ಪತ್ರ ನೀಡಿದರು.
ಉಳಿದಂತೆ ಯಾವುದೇ ಸಂಘಟನೆಗಳ ಪದಾಧಿಕಾರಿಗಳು, ಪ್ರತಿಭಟನಕಾರರು ರಸ್ತೆಗೆ ಇಳಿಯಲಿಲ್ಲ. ಪೊಲೀಸ್ ಇಲಾಖೆ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಿತ್ತು.