ಶಾಲಾ ಆವರಣದಲ್ಲಿ ನಡೆದ ಸಂತೆಯನ್ನು ಕಣ್ತುಂಬಿಕೊಂಡ ಗ್ರಾಮಸ್ಥರು, ಪಂಚಾಯಿತಿ ಸದಸ್ಯರು, ಎಸ್ಡಿಎಂಸಿ ಸದಸ್ಯರು, ಒಲಿಂಪಸ್ ಗ್ರೂಪ್ ಆಫ್ ಹಾಸ್ಪಿಟಲ್ ವೈದ್ಯರು ಹಾಗೂ ಶಾಲಾ ಶಿಕ್ಷಕರು ವಿದ್ಯಾರ್ಥಿಳಿಂದ ತರಕಾರಿ, ಸೊಪ್ಪು, ಹಣ್ಣುಗಳು, ಪಾನಿಪುರಿ, ಚುರುಮುರಿ, ಎಳನೀರು, ಜ್ಯೂಸ್, ಜಾಮೂನು ಸೇರಿದಂತೆ ತರಹೇವಾರಿ ತಿನಿಸುಗಳನ್ನು ಖರೀದಿಸಿ ಸವಿದರು. ಮಕ್ಕಳ ಸಂತೆಯಲ್ಲಿ ಮಾರಾಟಕ್ಕಿದ್ದ ಹಸು, ಮೇಕೆ ಹಾಗೂ ಪಾರಿವಾಳಗಳು ಗಮನ ಸೆಳೆದವು.
‘ಮಕ್ಕಳಿಗೆ ವ್ಯಾಪಾರ–ವಹಿವಾಟು ಹಾಗೂ ಗ್ರಾಮೀಣ ಭಾಗದಲ್ಲಿ ನಡೆಯುವ ಸಂತೆ ಹೇಗಿರುತ್ತದೆ ಎಂಬುದು ಸ್ವತಃ ಅನುಭವವಾಗಬೇಕು ಎಂಬ ಉದ್ದೇಶದಿಂದ ಮಕ್ಕಳ ಸಂತೆ ಆಯೋಜಿಸಲಾಗಿದೆ. ಇಂತಹ ಪ್ರಾಯೋಗಿಕ ಚಟುವಟಿಕೆಗಳಿಂದ ಅವರಲ್ಲಿ ಕಲಿಕಾಸಕ್ತಿ ಹೆಚ್ಚುವ ಜೊತೆಗೆ, ಜ್ಞಾನವೂ ವೃದ್ಧಿಯಾಗುತ್ತದೆ’ ಎಂದು ಶಾಲೆಯ ಮುಖ್ಯ ಶಿಕ್ಷಕ ಎಚ್.ಡಿ. ನಾರಾಯಣ ಹೇಳಿದರು.