ಬಿಡದಿ: ಕೆಂಚನಕುಪ್ಪೆ ಜನತಾ ಕಾಲೊನಿಯಲ್ಲಿ ಗ್ರಾಮ ಪಂಚಾಯಿತಿ ಕಾರ್ಯಲಯವಾಗಿ ಹಿಂದೆ ಕಾರ್ಯ ನಿರ್ವಹಿಸುತ್ತಿದ್ದ ಕಟ್ಟಡವು ಇದೀಗ ನಾದುರಸ್ತಿ ಸ್ಥಿತಿಯಲ್ಲಿದೆ.
ಇದನ್ನು ಪುರಸಭೆ ವ್ಯಾಪ್ತಿಗೆ ಸೇರಿಸಿದ ಬಳಿಕ ವಾಣಿಜ್ಯ ಮಳಿಗೆಗಳಾಗಿ ಗುರುತಿಸಲಾಗಿತ್ತು. ಆದರೆ, ಬೆಂಗಳೂರು –ಮೈಸೂರು ರಾಷ್ಟ್ರೀಯ ಹೆದ್ದಾರಿಯ ಅಗಲ ವಿಸ್ತರಿಸುವಾಗ ಕಟ್ಟಡದ ಕೆಲವೊಂದು ಭಾಗವನ್ನು ತೆರವುಗೊಳಿಸಲಾಗಿತ್ತು. ಸುಮಾರು ಒಂದೂವರೆ ವರ್ಷದಿಂದ ಈ ಕಟ್ಟಡವನ್ನು ನವೀಕರಣ ಮಾಡಲು ಪುರಸಭೆಯಿಂದ ಸಾಧ್ಯವಾಗುತ್ತಿಲ್ಲ.
‘ಹಿಂದೆ ಹಲವು ಬಾರಿ ಸಾಮಾನ್ಯ ಸಭೆಯಲ್ಲಿ ನಾವು ಈ ವಿಷಯವನ್ನು ಪ್ರಸ್ತಾಪ ಮಾಡಿದ್ದೇನೆ. ಕಟ್ಟಡ ನವೀಕರಿಸಿದರೆ ಪುರಸಭೆಗೆ ತಿಂಗಳಿಗೆ ಸುಮಾರು ₹30 ರಿಂದ 40 ಸಾವಿರ ಆದಾಯ ಬರಬಹುದು’ ಎಂದು ಪುರಸಭೆ ಸದಸ್ಯ ಕುಮಾರ್ ತಿಳಿಸಿದರು. ‘ಆದರೆ, ಆಡಳಿತ ಅಧಿಕಾರಿಗಳು ಯಾವುದೇ ರೀತಿಯ ಮನ್ನಣೆ ನೀಡುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.
‘ಕಟ್ಟಡ ಈಗ ಅನಾಥವಾಗಿದ್ದು ಅನೈತಿಕ ಚಟುವಟಿಕೆಗಳ ತಾಣವಾಗಿ ಪರಿವರ್ತನೆಗೊಂಡಿದೆ’ ಎಂದರು.
ಪುರಸಭೆಯ ಮುಖ್ಯಾಧಿಕಾರಿ ಚೇತನ್ ಕೊಳವಿ ಅವರನ್ನು ಪ್ರಶ್ನಿಸಿದಾಗ, ಕೂಡಲೇ ಟೆಂಡರ್ ಕರೆದು ಆಧುನೀಕರಿಸಿ, ಪುರಸಭೆ ವಾಣಿಜ್ಯ ಮಳಿಗೆಗಳಿಗಾಗಿ ನವೀಕರಿಸಲಾಗುವುದು. ಬಳಿಕ ಬಾಡಿಗೆಗೆ ನೀಡಲಾಗುವುದು ಎಂದು ಹೇಳಿದರು.