ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಸ್ತು ಖರೀದಿಗೂ ಮುನ್ನ ಇರಲಿ ಎಚ್ಚರ; ಚನ್ನೇಗೌಡ

ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಚನ್ನೆಗೌಡ ಸಲಹೆ
Published 3 ಜನವರಿ 2024, 14:41 IST
Last Updated 3 ಜನವರಿ 2024, 14:41 IST
ಅಕ್ಷರ ಗಾತ್ರ

ರಾಮನಗರ: ‘ಗ್ರಾಹಕರು ಯಾವುದೇ ವಸ್ತುಗಳನ್ನು ಖರೀದಿಸುವಾಗ, ಆ ವಸ್ತುವಿನ ಎಂ.ಆರ್.ಪಿ, ಪ್ರಮಾಣ, ತಯಾರಿಸಿದ ದಿನಾಂಕ, ಬಳಕೆಯ ಕೊನೆಯ ದಿನಾಂಕಗಳ ಬಗ್ಗೆ ತಪ್ಪದೆ ಗಮನ ಹರಿಸಬೇಕು’ ಎಂದು ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಎಚ್. ಚನ್ನೆಗೌಡ ಸಲಹೆ ನೀಡಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಿಲ್ಲಾಡಳಿತ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಹಾಗೂ ಕನಕಪುರದ ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರದ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಗ್ರಾಹಕರು ಪ್ಯಾಕೇಟ್ ಗುಣಮಟ್ಟವನ್ನು ಪರಿಶೀಲಿಸಬೇಕು. ಉತ್ಪಾದಕ ಕಂಪನಿಯು ತನ್ನ ಉತ್ಪನ್ನದ ಪ್ಯಾಕೇಜ್ ಒಳಗಿನ ಪದಾರ್ಥಗಳ ವಿವರಗಳನ್ನು ಮೇಲೆ ಮುದ್ರಿಸಿರಬೇಕು. ಗ್ರಾಹಕರು ತಾವು ಖರೀದಿಸಿರುವ ವಸ್ತುವಿನಲ್ಲಿ ಗುಣಮಟ್ಟವಿಲ್ಲದಿದ್ದಲ್ಲಿ, ಗ್ರಾಹಕರ ನ್ಯಾಯಾಲಯಕ್ಕೆ ದೂರು ಕೊಡಬಹುದು’ ಎಂದು ತಿಳಿಸಿದರು.

‘ಗ್ರಾಹಕರು ಖರೀದಿಸಿದ ವಸ್ತುವಿನಲ್ಲಿ ಅನ್ಯಾಯ ಕಂಡುಬಂದಲ್ಲಿ ರಾಜ್ಯ ಮತ್ತು ಜಿಲ್ಲೆಗಳಲ್ಲಿ ಗ್ರಾಹಕರ ನ್ಯಾಯಾಲಯಗಳಿವೆ. ಅಲ್ಲಿ ಅರ್ಜಿ ಸಲ್ಲಿಸಿ ಪರಿಹಾರವನ್ನು ಪಡೆದುಕೊಳ್ಳಬಹುದು. ಗ್ರಾಹಕರಿಗೆ ಒದಗಿಸುವ ಸೇವೆಯಲ್ಲಿ ಧಕ್ಕೆಯುಂಟಾದಾಗ ಆ ವ್ಯಕ್ತಿ ಕಾನೂನು ಸೇವೆಯನ್ನು ಉಚಿತವಾಗಿ ಪಡೆಯಬಹುದು’ ಎಂದು ಹೇಳಿದರು.

‘ಯಾವುದೇ ಉತ್ಪನ್ನಗಳ ಕುರಿತು ಜಾಹೀರಾತುಗಳನ್ನು ನೀಡುವಾಗ ಎಚ್ಚರಿಕೆ ವಹಿಸಬೇಕು. ಇದರಲ್ಲಿ ಸಮಸ್ಯೆ ಕಂಡುಬಂದರೆ ಕಾನೂನು ರೀತಿಯ ಶಿಕ್ಷೆ ವಿಧಿಸಲಾಗುತ್ತದೆ. ಜಾಹೀರಾತಿನಿಂದ ಗ್ರಾಹಕರಿಗೆ, ಸಾರ್ವಜನಿಕರಿಗೆ ಹಾನಿ ಅಥವಾ ದುಷ್ಪರಿಣಾಮಗಳು ಉಂಟಾಗುತ್ತದೆಯೇ ಎಂಬುದನ್ನು ಪರಿಶೀಲಿಸಿ ಮಾಲೀಕರು ಜಾಹೀರಾತು ನೀಡಬೇಕು’ ಎಂದು ಸಲಹೆ ನೀಡಿದರು.

ಬೆಂಗಳೂರು ಗ್ರಾಹಕರ ಮಾಹಿತಿ ಕೇಂದ್ರದ ಕ್ರಿಯೇಟ್ ಸಂಸ್ಥೆ ಅಧ್ಯಕ್ಷ ವೈ.ಜಿ. ಮುರುಳೀಧರನ್ ಅವರು, ಇ-ಕಾಮರ್ಸ್ ಮತ್ತು ಡಿಜಿಟಲ್ ವ್ಯಾಪಾರದ ಯುಗದಲ್ಲಿ ಗ್ರಾಹಕರ ರಕ್ಷಣೆ ಕುರಿತು ಮಾತನಾಡಿದರು.

ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯರಾದ ವೈ.ಎಸ್. ತಮ್ಮಣ್ಣ, ರೇಣುಕಾದೇವಿ ದೇಶಪಾಂಡೆ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕಿ ಸಿ.ಆರ್. ರಮ್ಯ, ಕಾನೂನು ಮಾಪನಶಾಸ್ತ್ರ ಇಲಾಖೆ ಸಹಾಯಕ ನಿಯಂತ್ರಕ ಲೋಕೇಶ್, ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರದ ಅಧ್ಯಕ್ಷರು ಹಾಗೂ ಜಿಲ್ಲಾ ಗ್ರಾಹಕ ರಕ್ಷಣಾ ಪರಿಷತ್‌ ಸದಸ್ಯರಾದ ಡಾ. ಕೆ.ಎಸ್. ಮಂಜುನಾಥ್, ಜಿಲ್ಲಾ ಗ್ರಾಹಕ ರಕ್ಷಣಾ ಪರಿಷತ್‌ನ ಸದಸ್ಯರಾದ ಚಂದ್ರಯ್ಯ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯೆ ಪ್ರೊ. ಶೈಲಜಾ ಹಾಗೂ ಕಾಲೇಜಿನ ಉಪನ್ಯಾಸಕರು ಇದ್ದರು.

- ನಾವು ಡಿಜಿಟಲ್ ಯುಗದಲ್ಲಿದ್ದೇವೆ. ಎಲ್ಲಾ ಮಾಹಿತಿಯೂ ಅಂಗೈಯಲ್ಲೇ ಲಭ್ಯವಿರುವಾಗ ಗ್ರಾಹಕರು ಯಾವುದೇ ವಿಷಯದಲ್ಲೂ ಯಾಮಾರಬಾರದು. ಗ್ರಾಹಕರಿಗೆ ನೀಡುವ ವಸ್ತುವಿನ ಗುಣಮಟ್ಟದಲ್ಲಿ ಸುರಕ್ಷತೆಗೆ ಒತ್ತು ನೀಡಬೇಕು.
ಎಚ್. ಚನ್ನೇಗೌಡ, ಅಧ್ಯಕ್ಷ, ಜಿಲ್ಲಾ ಗ್ರಾಹಕ ವ್ಯಾಜ್ಯಗಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT