ಕನಕಪುರ: ಹಾರೋಹಳ್ಳಿಯಲ್ಲಿ ಶನಿವಾರ ವಂಚಕರ ಗುಂಪೊಂದು ‘ನಮಗೆ ಸಿಕ್ಕಿರುವ ಚಿನ್ನಾಭರಣ ಇರುವ ಬ್ಯಾಗ್ ನಿಮಗೆ ಕೊಡುತ್ತೇವೆ. ನಿಮ್ಮ ಮೈಮೇಲಿರುವ ಚಿನ್ನಭಾರಣ ಬಿಚ್ಚಿಕೊಡಿ’ ಎಂದು ವೃದ್ಧೆಯ ಮೈಮೇಲಿದ್ದ ಚಿನ್ನಾಭರಣ ಬಿಚ್ಚಿಸಿಕೊಂಡು ಪರಾರಿಯಾಗಿದೆ.
ಹಾರೋಹಳ್ಳಿ ರಂಗನಾಥ ಬಡಾವಣೆಯ ನಿವಾಸಿ ಹೊನ್ನಮ್ಮ (65) ಚಿನ್ನಾಭರಣ ಕಳೆದುಕೊಂಡ ಮಹಿಳೆ. ಬಡಾವಣೆಯಲ್ಲಿ ನಡೆದು ಹೊರಟಿದ್ದ ವೃದ್ಧೆಯ ಬಳಿ ಬಂದ ಅಪರಿಚಿತರ ಗುಂಪೊಂದು ‘ನಮಗೆ ಚಿನ್ನಾಭರಣ ಮತ್ತು ಹಣ ಇರುವ ಬ್ಯಾಗ್ ಸಿಕ್ಕಿದೆ. ನಾವು ಹೇಳಿದ ಹಾಗೆ ನೀವು ಮಾಡಿದರೆ ಅದನ್ನುನಿಮಗೆ ಕೊಡುತ್ತೇವೆ’ ಎಂದು ಹೇಳಿ ನಂಬಿಸಿದೆ.
ಹೊನ್ನಮ್ಮಮೈಮೇಲೆ ಧರಿಸಿದ್ದ ಚಿನ್ನದ ಗುಂಡಿನ ಸರ, ಓಲೆ ಬಿಚ್ಚಿಸಿಕೊಂಡ ಗುಂಪು,ಅವರ ಕೈಗೆ ಬ್ಯಾಗ್ ಕೊಟ್ಟಿದೆ. ‘ಬ್ಯಾಗ್ ಇಲ್ಲಿ ತೆರೆದು ನೋಡಿದರೆ ಬೇರೆಯವರಿಗೆ ಗೊತ್ತಾಗುತ್ತದೆ. ಹಾಗಾಗಿ ಮನೆಗೆ ಹೋಗಿ ತೆರೆದು ನೋಡಿ’ ಎಂದು ಹೇಳಿ ಅಲ್ಲಿಂದ ಕಾಲ್ಕಿತ್ತಿದೆ.
ಹೊನ್ನಮ್ಮಮನೆಗೆ ಬಂದು ಬ್ಯಾಗ್ ತೆರೆದು ನೋಡಿದಾಗ ಮರಳಿನ ಚಿಕ್ಕ ಮೂಟೆ ಇತ್ತು.ತಾವು ಮೋಸ ಹೋಗಿರುವುದು ತಿಳಿಯುತ್ತಲೇ ಅವರು ಹಾರೋಹಳ್ಳಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ.