ಕುದೂರು (ರಾಮನಗರ): ಚುನಾವಣೆ ಹೊತ್ತಲ್ಲೇ ಇಲ್ಲಿನ ನಾರಸಂದ್ರದಲ್ಲಿ ಲಿಂಗಾಯತ ಸಮುದಾಯದ ಮುಖಂಡರೊಂದಿಗೆ ಸಭೆ ನಡೆಸಿದ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಅವರು, ತಮ್ಮನ್ನು ಬೆಂಬಲಿಸುವಂತೆ ಮನವಿ ಮಾಡಿದರು.
‘ತುಮಕೂರಿನ ಸಿದ್ಧಗಂಗಾ ಮಠದ ಲಿಂಗೈಕ್ಯ ಶಿವಕುಮಾರ ಸ್ವಾಮೀಜಿ ಅವರ ಹುಟ್ಟೂರು ವೀರಾಪುರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಒಂದೂವರೆ ವರ್ಷದೊಳಗೆ ಪೂರ್ಣಗೊಳಿಸಿ ಉದ್ಘಾಟನೆ ಮಾಡಲಾಗುವುದು’ ಎಂದು ಭರವಸೆ ನೀಡಿದರು.
‘ನನಗೆ ಜಾತಿ –ಧರ್ಮ ಗೊತ್ತಿಲ್ಲ. ನೀವು ನನಗೆ ಮತ ಹಾಕುತ್ತೀರಿ ಎಂಬ ವಿಶ್ವಾಸವಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೂತರೆ ನಿಂತರೆ ನೋಣವಿನಕೆರೆ ಅಜ್ಜಯ್ಯ ಅವರನ್ನು ಪೂಜಿಸುತ್ತಾರೆ. ಡಿಸಿಎಂ ಆಗಲು ಅವರ ಆಶೀರ್ವಾದವೂ ಕಾರಣ. ಈ ಚುನಾವಣೆಯಲ್ಲೂ ನಮಗೆ ಅವರ ಆಶೀರ್ವಾದವಿದೆ. ಶಿವಕುಮಾರ ಸ್ವಾಮೀಜಿ ಹಾಗೂ ಇಲ್ಲಿನ ಜೈನ ಮಠದ ಆಶೀರ್ವಾದವೂ ನಮಗಿದೆ’ ಎಂದರು.
‘ದೇಶದಲ್ಲಿ ಸುಳ್ಳುಗಳನ್ನೇ ಪದೇ ಪದೇ ಹೇಳಿ ನಿಜ ಮಾಡುವ ಪ್ರಯತ್ನಗಳು ನಡೆಯುತ್ತಿವೆ. ಯುವಜನರು ಭ್ರಮನಿರಸನವಾಗಿದ್ದು, ಬದಲಾವಣೆ ಬಯಸಿದ್ದಾರೆ. ಬಸವಣ್ಣ, ಕುವೆಂಪು, ಡಾ. ಬಿ.ಆರ್. ಅಂಬೇಡ್ಕರ್ ಅವರ ತತ್ವಗಳು ಮರೆಯಾಗುತ್ತಿವೆ. ಅವುಗಳನ್ನು ಪುನರ್ ಸ್ಥಾಪಿಸಲು ನಾವು ಹೋರಾಟ ಮಾಡುತ್ತಿದ್ದೇವೆ. ನಿಮ್ಮ ಪರವಾಗಿ ಕೆಲಸ ಮಾಡಿರುವ ನನಗೆ ಚುನಾವಣೆಯಲ್ಲಿ ಮತದ ಕೂಲಿ ಕೊಡಿ. ಇದರಿಂದ ಮತ್ತಷ್ಟು ಕೆಲಸ ಮಾಡಲು ಶಕ್ತಿ ಬರುತ್ತದೆ’ ಎಂದು ಕೋರಿದರು.
ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ ಹಾಗೂ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ. ರೇವಣ್ಣ ಇದ್ದರು.