ಅರ್ಧಕ್ಕೆ ಕ್ಷೇತ್ರ ತೊರೆದು ಅವಮಾನ: ಡಿಕೆಶಿ ವ್ಯಂಗ್ಯ
‘ಚನ್ನಪಟ್ಟಣದಲ್ಲಿ ಧ್ವಜ ಹಾರಿಸಲು ಜನಪ್ರತಿನಿಧಿ ಇಲ್ಲದ ಕಾರಣ ನಿಮ್ಮ ಮನೆ ಮಗನಾಗಿ ನಾನು ಇಲ್ಲಿಗೆ ಬಂದಿದ್ದೇನೆ. ನಿಮ್ಮನ್ನು ಬಿಟ್ಟು ಹೋಗುವ ಪ್ರಶ್ನೆಯೇ ಇಲ್ಲ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು. ಚನ್ನಪಟ್ಟಣ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ಭಾಷಣದಲ್ಲಿ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು. ‘ಧ್ವಜವನ್ನು ಅರ್ಧಕ್ಕೆ ಹಾರಿಸುವುದು ಹೇಗೆ ರಾಷ್ಟ್ರಧ್ವಜಕ್ಕೆ ಮಾಡುವ ಅಪಮಾನವೋ ಅದೇ ರೀತಿ ಜನರಿಂದ ಆಯ್ಕೆಯಾದ ವ್ಯಕ್ತಿ ಅರ್ಧಕ್ಕೆ ಬಿಟ್ಟು ಹೋಗುವುದು ಜನರಿಗೆ ಮಾಡುವ ಅಪಮಾನ’ ಎಂದು ಹೋಲಿಕೆ ಮಾಡಿದರು. ಗುಲಾಮಗಿರಿಯಿಂದ ಹೊರಬಂದ ದಿನವೇ ಸ್ವಾತಂತ್ರ್ಯ. ಇಂದು ಕೇವಲ ಧ್ವಜಾರೋಹಣವಾಗಿಲ್ಲ. ಬದಲಿಗೆ ಚನ್ನಪಟ್ಟಣ ಕ್ಷೇತ್ರದ ಅಭಿವೃದ್ಧಿಯ ಆರೋಹಣವಾಗಿದೆ ಎಂದು ಬಣ್ಣಿಸಿದರು.