ಚನ್ನಪಟ್ಟಣ: ನಗರದ ಬಸ್ ನಿಲ್ದಾಣದಲ್ಲಿ ಸೋಮವಾರ ಮದ್ಯ ವ್ಯಸನಿಯೊಬ್ಬ ಒಡೆದುಹೋದ ಟ್ಯೂಬ್ ಲೈಟ್ ಹಿಡಿದು ದಾರಿಯಲ್ಲಿ ಸಿಕ್ಕಸಿಕ್ಕವರ ಮೇಲೆ ಹಲ್ಲೆ ನಡೆಸಿ, ಗಾಯಗೊಳಿಸಿದ್ದಾನೆ.
ಮದ್ಯಪಾನ ಮಾಡಿದ್ದ ತಾಲ್ಲೂಕಿನ ದಶವಾರ ಗ್ರಾಮದ ಅಪ್ಪಾಜಿ ಎಂಬಾತ ನಾಲ್ವರ ಮೇಲೆ ಟ್ಯೂಬ್ ಲೈಟ್ ನಿಂದ ಹಲ್ಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೊದಲು ಬಸ್ ನಿಲ್ದಾಣದಲ್ಲಿ ಟ್ಯೂಬ್ ಲೈಟ್ ಹಿಡಿದು ತಿರುಗಾಡುತ್ತಿದ್ದ ಆತನನ್ನುಪ್ರಶ್ನಿಸಿದ ನಿಲ್ದಾಣದ ಸಂಚಾರ ನಿಯಂತ್ರಕರ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಅವರು ಸ್ವಲ್ಪದರಲ್ಲೆ ಪಾರಾಗಿದ್ದಾರೆ. ಆನಂತರ ನಿಲ್ದಾಣದಲ್ಲಿದ್ದ ಪೊಲೀಸರು ಆತನನ್ನು ಹಿಡಿಯಲು ಮುಂದಾದಾಗ ಓಡಿಹೋಗಿದ್ದಾನೆ.
ದಾರಿಯಲ್ಲಿ ಸಿಕ್ಕಸಿಕ್ಕವರನ್ನು ಟ್ಯೂಬ್ ಲೈಟ್ ನಿಂದ ಹೊಡೆದು ಗಾಯಗೊಳಿಸಿದ್ದಾರೆ. ಒಬ್ಬ ವೃದ್ಧ, ಆಟೊ ಚಾಲಕ, ಇಬ್ಬರು ಬೈಕ್ ಸವಾರರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆನಂತರ ಸಾರ್ವಜನಿಕರು ಆತನನ್ನು ಹಿಡಿದು ಥಳಿಸಿ, ಪೊಲೀಸರಿಗೆ ಒಪ್ಪಿಸಿದ್ದಾರೆ. ಗಾಯಗೊಂಡವರನ್ನು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.