ಕನಕಪುರ: ತಾಲ್ಲೂಕಿನ ಕೋಡಿಹಳ್ಳಿ ಹೋಬಳಿಯ ಹುಣಸನಹಳ್ಳಿ ಗ್ರಾಮದಲ್ಲಿ ಕಾಡಾನೆಗಳು ದಾಳಿ ಮುಂದುವರಿಸಿದ್ದು, ಬುಧವಾರ ರಾತ್ರಿ ರೈತರ ಜಮೀನುಗಳಿಗೆ ನುಗ್ಗಿದ್ದು, ವಿವಿಧ ಬೆಳೆಗಳನ್ನು ನಾಶಪಡಿಸಿವೆ.
ಹುಣಸನಹಳ್ಳಿ ಗ್ರಾಮದ ವೆಂಕಟಪ್ಪ, ಮಂಜುನಾಥ್, ಶರ್ಮ, ಮಹದೇವಸ್ವಾಮಿ ಅವರ ಜಮೀನಿನಲ್ಲಿ ಬಾಳೆ, ತೆಂಗು, ಮಾವು, ತರಕಾರಿ ಬೆಳೆಗಳನ್ನು ನಾಶಪಡಿಸಿದ್ದು ಲಕ್ಷಾಂತರ ರೂಪಾಯಿ ನಷ್ಟವಾಗಿದೆ.
ಕಾಡಾನೆಗಳು ಈ ಹಿಂದೆಯು ದಾಳಿ ನಡೆಸಿ ರೈತರ ಫಸಲನ್ನು ನಾಶ ಮಾಡಿದ್ದವು. ಆ ಸಂದರ್ಭದಲ್ಲಿ ಅರಣ್ಯ ಅಧಿಕಾರಿಗಳು ಇನ್ನು ಮುಂದೆ ಆನೆಗಳು ಬರದಂತೆ ತಡೆಗಟ್ಟುವುದಾಗಿ ಭರವಸೆ ನೀಡಿದ್ದರು. ಆದರೆ, ಯಾವುದೇ ಪ್ರಯೋಜನವಾಗಿಲ್ಲ ಎಂದು ರೈತರು ಅಸಹಾಯಕತೆ ತೋಡಿಕೊಂಡಿದ್ದಾರೆ.
ಆನೆಗಳು ಹಿಂಡಾಗಿ ಗ್ರಾಮದ ಸುತ್ತಮುತ್ತಲಿನ ಪ್ರದೇಶದಲ್ಲಿ ಬೀಡುಬಿಟ್ಟಿರುವುದರಿಂದ ರೈತರು ಜಮೀನುಗಳ ಕಡೆ ಹೋಗುವುದಕ್ಕೆ ಭಯಪಡುವಂತಾಗಿದೆ. ಕೃಷಿಯನ್ನೇ ನಂಬಿರುವ ಈ ಭಾಗದ ರೈತರಿಗೆ ಕಾಡಾನೆ ದಾಳಿಯಿಂದ ಕೃಷಿಯನ್ನು ಕೈ ಬಿಡುವಂತಾಗಿದೆ. ಅರಣ್ಯ ಅಧಿಕಾರಿಗಳು ರೈತರ ಸಹಾಯಕ್ಕೆ ಬರಬೇಕು ರೈತರ ಬೆಳೆಯನ್ನು ರಕ್ಷಣೆ ಮಾಡಬೇಕು ಎಂದು ರೈತ ಸಂಘದ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.
ಸಂತ್ರಸ್ತರ ರೈತರಿಗೆ ವೈಜ್ಞಾನಿಕ ವಿಧಾನದಡಿ ಬೆಳೆ ನಷ್ಟದ ಪರಿಹಾರಬೇಕು. ಇಲ್ಲವಾದರೆ ಹೋರಾಟ ಅನಿವಾರ್ಯ ಎಂದುಎಚ್ಚರಿಸಿದ್ದಾರೆ.