ಚನ್ನಪಟ್ಟಣ: ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳು ತಮ್ಮ ಜವಾಬ್ದಾರಿಯನ್ನು ಮರೆಯದೆ ಮುಂದಿನ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮರೀಗೌಡ ಕಿವಿಮಾತು ಹೇಳಿದರು.
ನಗರದಲ್ಲಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಗುರುವಾರ ಏರ್ಪಡಿಸಿದ್ದ ಪ್ರಸಕ್ತ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ಈ ವರ್ಷ ಹೆಚ್ಚು ಭದ್ರತೆಯಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ನಡೆಸಲಾಗಿದೆ. ಈ ನಿಟ್ಟಿನಲ್ಲಿ ಈ ಬಾರಿಯ ಫಲಿತಾಂಶ ಸ್ವಲ್ಪ ಪ್ರಮಾಣದಲ್ಲಿ ಕಡಿಮೆಯಾಗಿದೆ. ಆದರೆ ಗ್ರಾಮೀಣ ಭಾಗದ ಶಾಲೆಗಳ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಇದೇ ರೀತಿಯ ಉತ್ತಮ ಸಾಧನೆ ಮುಂದಿನ ದಿನಗಳಲ್ಲಿಯೂ ಮೂಡಿಬರಲಿ. ಮುಂದಿನ ದಿನಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಂಡು ಸಾಧನೆ ಮಾಡಿ ಎಂದು ಸಲಹೆ ನೀಡಿದರು.
ಶಿಕ್ಷಣ ಸಂಯೋಜಕ ಚಕ್ಕೆರೆ ಯೋಗೀಶ್ ಮಾತನಾಡಿ, ವಿದ್ಯಾರ್ಥಿಗಳಿಗೆ ಎಸ್ಎಸ್ಎಲ್ಸಿ ಪರೀಕ್ಷೆ ಮುಂದಿನ ಜೀವನಕ್ಕೆ ಪ್ರಮುಖ ಘಟ್ಟವಾಗಿದೆ. ಇಲ್ಲಿಂದ ನಿಮ್ಮ ಶೈಕ್ಷಣಿಕ ಪ್ರಯಾಣ ಆರಂಭವಾಗಿ ಮುಂದೆ ದೊಡ್ಡಮಟ್ಟದಲ್ಲಿ ಸಾಧನೆ ಮಾಡುವ ಹಾದಿಯಾಗಲಿದೆ. ವಿದ್ಯಾರ್ಥಿಗಳು ಮುಂದಿನ ಸಾಧನೆಗೆ ಮುಂದಾಗಬೇಕು ಎಂದರು.
ಎಸ್ಎಸ್ಎಲ್ಸಿಯಲ್ಲಿ ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದ ಗೌತಮಿ, ದ್ವಿತೀಯ ಸ್ಥಾನ ಪಡೆದ ಹರ್ಷಪ್ರಕಾಶ್, ತೃತೀಯ ಸ್ಥಾನ ಪಡೆದ ಕಾವ್ಯಶ್ರೀ, ನಾಲ್ಕನೇ ಸ್ಥಾನ ಪಡೆದ ಯಶಸ್ವಿನಿ, ಉತ್ತಮ ಅಂಕ ಪಡೆದ ಮೋನಿಷಾ, ಮೌರ್ಯಶ್ರೀ, ರಿಷಿಕಾ ಪ್ರಭುತೇಜ, ಧನುಜಾ, ಕನ್ನಡ ವಿಷಯದಲ್ಲಿ 125ಕ್ಕೆ 124 ಅಂಕ ಪಡೆದ ಸುಳ್ಳೇರಿಯ ಮಹದೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಪಿ.ಪ್ರಕೃತಿ, ಬಿಂದು, ಎಸ್.ಆರ್. ಕೀರ್ತಾ, ಜಿ.ಪಿ.ಹೇಮ, ಎಂ.ಎನ್. ದರ್ಶನ್ ಅವರನ್ನು ಸನ್ಮಾನಿಸಲಾಯಿತು.
ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ರಮೇಶ್ ಗೌಡ, ಜಿಲ್ಲಾ ಘಟಕದ ಅಧ್ಯಕ್ಷ ಬೇವೂರು ಯೋಗೇಶ್ ಗೌಡ, ಪದಾಧಿಕಾರಿಗಳಾದ ಆರ್. ಶಂಕರ್, ಚಿಕ್ಕಣಪ್ಪ, ಸುಳ್ಳೇರಿ ಮಹದೇಶ್ವರ ಪ್ರೌಢಶಾಲೆಯ ಮುಖ್ಯಶಿಕ್ಷಕ ರಮೇಶ್, ಕನ್ನಡ ಶಿಕ್ಷಕ ಎನ್.ಎಸ್. ಸಿದ್ದರಾಜು, ಕಾರ್ಯದರ್ಶಿ ಎಂ.ಎಲ್. ಶಿವಸ್ವಾಮಿ, ಪೋಷಕರಾದ ಶಿವರಾಜು, ಉಮಾ, ಸುಜಯ್, ನಟರಾಜ್, ಶಶಿಕಲಾ, ಇತರರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.