ಮಾಗಡಿ: ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗುತ್ತಿದ್ದು ಇದಕ್ಕೆಬೆಸ್ಕಾಂ ಅಧಿಕಾರಿಗಳೇ ನೇರ ಹೊಣೆ. ನಿರಂತರ ವಿದ್ಯುತ್ ನೀಡದಿದ್ದರೆ ಕಚೇರಿಗೆ ಬೀಗ ಹಾಕುವುದಾಗಿ ತಾಲ್ಲೂಕು ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಹೊಸಪಾಳ್ಯ ಲೋಕೇಶ್ ಎಚ್ಚರಿಸಿದರು.
ಪಟ್ಟಣದ ಬೆಸ್ಕಾಂ ಕಚೇರಿಯಲ್ಲಿ ಶನಿವಾರ ನಡೆದ ಕುಂದು –ಕೊರತೆ ಸಭೆಯಲ್ಲಿ ಮಾತನಾಡಿದರು. ರೈತರಿಗೆ ಟ್ರಾನ್ಸ್ಫಾರ್ಮರ್ ನೀಡುವಲ್ಲಿ ಅಧಿಕಾರಿಗಳು ರೈತರನ್ನು ವಂಚಿಸುತ್ತಿದ್ದಾರೆ. ಲಂಚ ಕೊಡದೆ ಇದ್ದರೆ ವಿದ್ಯುತ್ ಸರಬರಾಜು ಮಾಡುವುದೇ ಇಲ್ಲ. ಎಚ್.ವಿ.ಡಿ.ಎಸ್ ಯೋಜನೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ರೈತರ ಸಮಸ್ಯೆ ಬಗೆಹರಿಸಲು ಮುಂದಾದಬೇಕು ಎಂದರು.
ರೈತ ಸಂಘದ ಕಾರ್ಯದರ್ಶಿ ಮಧುಗೌಡ, ಗೊಲ್ಲರಹಟ್ಟಿ ಜಯಣ್ಣ, ಮತ್ತದ ಹನುಮಂತರಾಯಪ್ಪ, ರೈತರ ಸಮಸ್ಯೆಗಳ ಬಗ್ಗೆ ಮಾತನಾಡಿದರು. ರೈತ ಸಂಘದ ಪದಾಧಿಕಾರಿಗಳು ಇದ್ದರು.
ಪ್ರತಿಭಟನೆ: ಪಟ್ಟಣದಲ್ಲಿ ಇದ್ದ ಎಸ್ಬಿಐನ ಎರಡು ಶಾಖೆಗಳಲ್ಲಿ ಒಂದು ಶಾಖೆ ಮುಚ್ಚಿದ್ದು, ಗ್ರಾಹಕರಿಗೆ ತೊಂದರೆ ಆಗಿದೆ. ಎಸ್ಬಿಐ ಮತ್ತೊಂದು ಶಾಖೆ ಪುನರಾರಂಭಿಸುವಂತೆ ಆಗ್ರಹಿಸಿ ಬ್ಯಾಂಕ್ ಗ್ರಾಹಕರೊಂದಿಗೆ ರೈತ ಸಂಘದಿಂದ ಜುಲೈ12ರಂದು ಬ್ಯಾಂಕ್ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಸಂಘದ ಅಧ್ಯಕ್ಷ ಹೊಸಪಾಳ್ಯ ಲೋಕೇಶ್ ತಿಳಿಸಿದರು.