ಬಿಡದಿ: ಇಲ್ಲಿನ ರೈತರ ಸೇವಾ ಸಹಕಾರ ಸಂಘದ ನೂತನ ಉಪಾಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಸದಸ್ಯ ವಿ. ರಾಮಯ್ಯ ಅವಿರೋಧವಾಗಿ ಆಯ್ಕೆ ಆಗಿದ್ದಾರೆ.
ಉಪಾಧ್ಯಕ್ಷರಾಗಿದ್ದ ಎಚ್.ವಿ. ರಘು ಅವರ ರಾಜೀನಾಮೆಯಿಂದ ತೆರವಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಬುಧವಾರ ಚುನಾವಣೆ ನಿಗದಿಯಾಗಿತ್ತು. ಸಂಘದ ಕಾರ್ಯಾಲಯದ ಸಭಾಂಗಣದಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ರಾಮಯ್ಯ ಅವರೊಬ್ಬರೇ ನಾಮಪತ್ರ ಸಲ್ಲಿಸಿದ್ದರು. ಹಾಗಾಗಿ, ಚುನಾವಣಾಧಿಕಾರಿ ಕೆ.ಟಿ. ಉಮೇಶ್ ಅವಿರೋಧ ಆಯ್ಕೆಯನ್ನು ಘೋಷಿಸಿದರು.
ಚುನಾವಣಾ ಪ್ರಕ್ರಿಯೆಯಲ್ಲಿ ಜೆಡಿಎಸ್ ಬೆಂಬಲಿತ ಶ್ರೀರಾಮಯ್ಯ ಸೇರಿದಂತೆ ಎಲ್ಲಾ ಎಂಟು ನಿರ್ದೇಶಕರು ಹಾಜರಿದ್ದರು. ಕಾಂಗ್ರೆಸ್ ಬೆಂಬಲಿತ ನಾಲ್ವರು ನಿರ್ದೇಶಕರು ಗೈರು ಹಾಜರಾಗಿದ್ದರು.
ರಾಮಯ್ಯ ಮಾತನಾಡಿ, ‘ರೈತರ ಹಿತಕ್ಕಾಗಿ ಸ್ಥಾಪನೆಯಾಗಿರುವ ಸಂಘದ ಶ್ರೇಯೋಭಿವೃದ್ಧಿಗೆ ಅಧ್ಯಕ್ಷರು ಹಾಗೂ ನಿರ್ದೇಶಕರ ಜೊತೆಗೂಡಿ ಶ್ರಮಿಸಲಾಗುವುದು’ ಎಂದು ಹೇಳಿದರು.
ಸಂಘದಿಂದ ರೈತರಿಗೆ ಇಲ್ಲಿಯವರೆಗೆ ₹ 1.50 ಕೋಟಿ ಬೆಳೆ ಸಾಲ ನಿಗದಿಯಾಗಿದೆ. ಸಾಲದ ಪ್ರಮಾಣವನ್ನು ₹ 1 ಲಕ್ಷದಿಂದ ₹ 2 ಲಕ್ಷಕ್ಕೆ ಹೆಚ್ಚಿಸಲು ಚಿಂತನೆ ನಡೆಸಲಾಗುತ್ತಿದೆ. ಸೊಸೈಟಿಗೆ ಶೀಘ್ರದಲ್ಲಿಯೇ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳನ್ನು ನೇಮಕ ಮಾಡಲಾಗುವುದು ಎಂದು ತಿಳಿಸಿದರು.
ಸಂಘದ ಅಧ್ಯಕ್ಷೆ ಅನ್ನಪೂರ್ಣೇಶ್ವರಿ, ನಿರ್ದೇಶಕರಾದ ನರಸಿಂಹಯ್ಯ, ಎಚ್.ವಿ. ರಘು, ಜಿ. ಕೃಷ್ಣ, ರೇಣುಕಪ್ಪ, ರವಿಕುಮಾರ್, ಮುಖಂಡರಾದ ಶಿವಲಿಂಗಯ್ಯ ಭಕ್ತಿಪುರ, ಮುನಿತಿಮ್ಮಯ್ಯ ಕರಡಿಗೌಡನದೊಡ್ಡಿ ಇದ್ದರು.