ಚನ್ನಪಟ್ಟಣ: ತಾಲ್ಲೂಕಿನ ಮಾದಾಪುರ ಕೆರೆ ಒತ್ತುವರಿ ನಡೆದಿದೆ. ಆ ಜಾಗದಲ್ಲಿ ಕೊಳವೆ ಬಾವಿ ಕೊರೆಸಿ ತೆಂಗು ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆದಿದ್ದ ಜಾಗವನ್ನು ತಹಶೀಲ್ದಾರ್ ಸುದರ್ಶನ್ ಗುರುವಾರ ದಾಳಿ ನಡೆಸಿ ಒತ್ತುವರಿ ಜಮೀನು ತೆರವುಗೊಳಿಸಿದರು.
ಗ್ರಾಮದ ಸರ್ವೆ ನಂಬರ್ 77ರಲ್ಲಿ ಸುಮಾರು 11.28 ಎಕರೆ ಜಾಗವನ್ನು ಹಲವು ವರ್ಷಗಳ ಹಿಂದೆಯೇ ಸಂಪೂರ್ಣವಾಗಿ ಒತ್ತುವರಿ ಮಾಡಿಕೊಂಡಿದ್ದ ಕೆಲವರು ಅಲ್ಲಿ ತೆಂಗು ಮರಗಳನ್ನು ಬೆಳೆಸಿದ್ದರು. ಈ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ.
ಗ್ರಾಮದಲ್ಲಿರುವ ಸರ್ಕಾರಿ ಕೆರೆ ಮಾಯವಾಗಿರುವ ಬಗ್ಗೆ ದೂರುಗಳು ಬಂದಿದ್ದ ಹಿನ್ನೆಲೆಯಲ್ಲಿ ಕೆಲವು ದಿನಗಳ ಹಿಂದೆ ಸರ್ವೆ ಇಲಾಖೆ ಅಧಿಕಾರಿ ವರ್ಗದ ಜತೆಗೆ ಗ್ರಾಮಕ್ಕೆ ಭೇಟಿ ನೀಡಿದ್ದ ತಹಶೀಲ್ದಾರ್ ಅವರು, ಫಲಭರಿತ ತೆಂಗಿನ ಮರಗಳು, ವಿವಿಧ ಬೆಳೆಗಳು ಇರುವ ಸ್ಥಳ ಸರ್ಕಾರಿ ಕೆರೆ ಎಂದು ಸರ್ವೆ ನಡೆಸಿದ್ದರು.
ಗುರುವಾರ ಮುಂಜಾನೆ ಜೆ.ಸಿ.ಬಿ. ಜತೆ ಸ್ಥಳಕ್ಕೆ ದಿಢೀರ್ ಭೇಟಿ ನೀಡಿದ ತಹಶೀಲ್ದಾರ್ ಹಾಗೂ ಅಧಿಕಾರಿಗಳ ತಂಡ ಒತ್ತುವರಿಯಾಗಿದ್ದ ಸರ್ಕಾರಿ ಕೆರೆಯ 11.28ಎಕರೆ ಭೂಮಿ ವಶಕ್ಕೆ ಪಡೆದರು. ತೆರವು ಮಾಡಿದ ಸರ್ಕಾರಿ ಕೆರೆಯನ್ನು ಬಾಣಗಹಳ್ಳಿ ಗ್ರಾಮ ಪಂಚಾಯಿತಿ ಆಶ್ರಯಕ್ಕೆ ನೀಡಿ, ಯಾವುದೇ ಅತಿಕ್ರಮ ಪ್ರವೇಶ ಆಗದಂತೆ ಎಚ್ಚರಿಕೆ ವಹಿಸಲು ಸೂಚಿಸಿದರು.
ವಿರುಪಾಕ್ಷಿಪುರ ಹೋಬಳಿಯ ರೆವಿನ್ಯೂ ಇನ್ ಸ್ಪೆಕ್ಟರ್ ರಜತ್, ಗ್ರಾಮ ಲೆಕ್ಕಿಗರಾದ ರಾಜೇಶ್ವರಿ, ಸರ್ವೆಯರ್ ಪುಟ್ಟರಾಜು, ಅಕ್ಕೂರು ಪೊಲೀಸ್ ಠಾಣೆಯ ಸಹಾಯಕ ಸಬ್ ಇನ್ ಸ್ಪೆಕ್ಟರ್ ಅರಸು, ತಾಲ್ಲೂಕು ಆಡಳಿತದ ಸಿಬ್ಬಂದಿ ಹಾಗೂ ಪೊಲೀಸ್ ಸಿಬ್ಬಂದಿ ಇದ್ದರು.