ರಾಮನಗರ (ಕನಕಪುರ): ಸ್ವಕ್ಷೇತ್ರ ಕನಕಪುರಕ್ಕೆ ಭೇಟಿ ನೀಡಿದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರನ್ನು ಕ್ಷೇತ್ರದ ಕಲ್ಲಹಳ್ಳಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸೇಬಿನ ಬೃಹತ್ ಹಾರವನ್ನು ಹಾಕಿ ಅದ್ಧೂರಿಯಾಗಿ ಸ್ವಾಗತಿಸಿದರು.
ತೆರೆದ ವಾಹನದಲ್ಲಿ ಗ್ರಾಮದ ಬೀದಿಯಲ್ಲಿ ಮೆರವಣಿಗೆ ಮಾಡಲಾಯಿತು. ಮಹಿಳೆಯರು ಪೂರ್ಣಕುಂಭ ಹೊತ್ತು ಹೆಜ್ಜೆ ಹಾಕಿದರು. ರಸ್ತೆ ಬದಿ ನಿಂತಿದ್ದವರು ಶಿವಕುಮಾರ್ ಅವರಿಗೆ ಹೂ ಎರಚಿ ಸ್ವಾಗತಿಸಿದರು. ಡೊಳ್ಳು- ಮೇಳದ ಅಬ್ಬರದಲ್ಲಿ ನೂರಾರು ಕಾರ್ಯಕರ್ತರು ಮೆರವಣಿಗೆಯಲ್ಲಿ ಸಾಗಿದರು. ದಾರಿಯುದ್ದಕ್ಕೂ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಗ್ರಾಮದ ವೆಂಕಟರಮಣ ಸ್ವಾಮಿ ದೇವಸ್ಥಾನಕ್ಕೆ ಶಿವಕುಮಾರ್ ಅವರು ಬರುತ್ತಿದ್ದಂತೆ, ಕಾರ್ಯಕರ್ತರು ತಮ್ಮ ನೆಚ್ಚಿನ ನಾಯಕನಿಗೆ ಕ್ರೇನ್ ನಿಂದ ಸೇಬಿನ ಬೃಹತ್ ಹಾರವನ್ನು ಹಾಕಿ ಅಭಿಮಾನ ಮೆರೆದರು.