ಮಾಗಡಿ: ಗುಡುಗು, ಸಿಡಿಲು, ಮಿಂಚಿನೊಂದಿಗೆ ಭಾನುವಾರ ರಾತ್ರಿ ತಾಲ್ಲೂಕಿನ ವಿವಿಧೆಡೆಗಳಲ್ಲಿ ಆಲಿಕಲ್ಲು ಸಹಿತ ಸುರಿದ ಮಳೆಗಾಳಿಗೆ ಸಿಲುಕಿ ರೈತರು ಬೆಳೆದ ಬೆಳೆಗಳು ನೆಲಕ್ಕೆ ಉರುಳಿವೆ. ಬಿರುಗಾಳಿಗೆ ಸಿಲುಕಿ ವಿದ್ಯುತ್ ಕಂಬಗಳು ಮತ್ತು ಮರಗಿಡಗಳು ಧರೆಗೆ ಉರುಳಿ ನಷ್ಟ ಸಂಭವಿಸಿದೆ.
ತಾಲ್ಲೂಕಿನ ಕಾಳಾರಿ ಕಾವಲ್ ಗ್ರಾಮದ ಚಿಕ್ಕಣ್ಣ ಸರ್ವೇ ನಂಬರ್ 4/1 ಬಿ ಒಂದು ಎಕರೆ ಜಾಗದಲ್ಲಿ ಪಾಲಿಹೌಸ್ ಮತ್ತು ನೆರಳು ಪರದೆಯನ್ನು ಹಾಕಿದ್ದು ಅರ್ಧ ಎಕರೆಯಲ್ಲಿ ಹಾಕಿದ್ದ ಪಾಲಿಹೌಸ್ ಬಿರುಗಾಳಿಗೆ ಸಿಲುಕಿ ಸಂಪೂರ್ಣ ನೆಲಕ್ಕೆ ಉರುಳಿದೆ. ಸೌತೆಕಾಯಿ ಬೆಳೆ ನಾಶವಾಗಿದೆ. ತುಂಬಾ ನಷ್ಟವಾಗಿದೆ ಎಂದು ರೈತರು ನೋವನ್ನು ತೋಡಿಕೊಂಡಿದ್ದಾರೆ.
ಪಟ್ಟಣದ ತಿರುಮಲೆ ರಸ್ತೆಯಲ್ಲಿನ ಉದ್ಯಾನದಲ್ಲಿ ಮರಗಳ ಕೊಂಬೆಗಳು ಮುರಿದಿವೆ. ಪುರಸಭೆಯ ವಸತಿ ಗೃಹಗಳ ಬಳಿ ಇದ್ದ ಭಾರಿ ಗಾತ್ರದ ನೀಲಗಿರಿ ಮರ ಬುಡಮೇಲಾಗಿ ಕಾಂಪೌಂಡ್ ಮೇಲೆ ಬಿದ್ದಿದೆ. ಬೈಚಾಪುರ ರಸ್ತೆಯ ಬೆಸ್ಕಾಂ ಪವರ್ ಸ್ಟೇಷನ್ ಎದುರಿನ ಹುಣಿಸೆಮರ ವಿದ್ಯುತ್ ಕಂಬದ ಮೇಲೆ ಒರಗಿದೆ. ವಿದ್ಯುತ್ ಕಂಬಗಳು ಮುರಿದುಬಿದ್ದಿವೆ.