ಮಾಗಡಿ: ಪಟ್ಟಣದ ಜಿಕೆಬಿಎಂಎಸ್ ಆವರಣದಲ್ಲಿ ಅರ್ಧಕ್ಕೆ ನಿಂತಿರುವ ಸರ್ಕಾರಿ ಬಾಲಕಿಯರ ಕಟ್ಟಡ ಕಾಮಗಾರಿ ಪೂರ್ಣಗೊಳಿಸಿ, ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಪೋಷಕರು ಒತ್ತಾಯಿಸಿದ್ದಾರೆ.
ಎರಡು ವರ್ಷಗಳ ಹಿಂದೆ ₹ 96 ಲಕ್ಷ ವೆಚ್ಚದಲ್ಲಿ ಸರ್ಕಾರಿ ಬಾಲಕಿಯರ ಪ್ರೌಢಶಾಲೆ ನೂತನ ಕಟ್ಟಡ ಕಟ್ಟಲು ಆರಂಭಿಸಲಾಯಿತು. ನೆಲಹಂತದ ಕಟ್ಟಡ ಕಾಮಗಾರಿ ನಡೆಯಿತು.
ಒಟ್ಟು 6 ಕೊಠಡಿಗಳನ್ನು ಕಟ್ಟಿಸಬೇಕಿದೆ. ಕಟ್ಟಡ ಕಾಮಗಾರಿ ನಿಲ್ಲಿಸಲಾಗಿದೆ. ಅರ್ಧಕ್ಕೆ ನಿರ್ಮಾಣವಾಗಿರುವ ಶಾಲಾ ಕಟ್ಟಡದಲ್ಲಿ ಬಿಡಾಡಿ ದನಕರುಗಳು, ನಾಯಿಗಳು ಮಲಗುತ್ತಿವೆ. ಕಟ್ಟಡ ಕಾಮಗಾರಿಗೆ ಬಳಸಬೇಕಿದ್ದ ಸಿಮೆಂಟ್ ಗಟ್ಟಿಯಾಗಿದೆ. ಕಬ್ಬಿಣದ ಸರಳುಗಳು ತುಕ್ಕು ಹಿಡಿದಿವೆ ಎಂದು ದೂರಿದ್ದಾರೆ.
ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿಯಿಂದ ಕಟ್ಟಡಕ್ಕೆ ಬಳಸಬೇಕಿದ್ದ ಪರಿಕರಗಳು ನಷ್ಟವಾಗಿವೆ. ಕಟ್ಟಡ ನಿರ್ಮಿಸಲು ಪ್ರಾಮಾಣಿಕವಾಗಿ ಶ್ರಮಿಸಿದ್ದ ಬಿಇಒ ಅವರನ್ನು ರಾಜಕೀಯ ಮಾಡಿ ವರ್ಗಾವಣೆ ಮಾಡಿಸಲಾಯಿತು. ಗುತ್ತಿಗೆದಾರನನ್ನು ಕೇಳುವವರೆ ಇಲ್ಲದಂತಾಗಿ ಶಾಲಾ ಕಟ್ಟಡ ಕಾಮಗಾರಿ ಅರ್ಧಕ್ಕೆ ನಿಂತಿದೆ ಎಂದು ಆರೋಪಿಸಿದ್ದಾರೆ.
‘10ನೇ ತರಗತಿ ಬಾಲಕಿಯರಿಗೆ ಶೌಚಾಲಯವಿಲ್ಲ. ನಮ್ಮ ಮಕ್ಕಳು ಮನೆಯಲ್ಲಿ ನಿತ್ಯಕರ್ಮ ಮುಗಿಸಿಕೊಂಡು ಶಾಲೆಗೆ ಬಂದವರು ಸಂಜೆ ಮತ್ತೆ ಮನೆಗೆ ಬಂದ ನಂತರ ನಿತ್ಯಕರ್ಮ ಮಾಡಬೇಕಿದೆ. ಡಿಡಿಪಿಐ ಮತ್ತು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಚ್.ಎನ್.ಅಶೋಕ್ ಮತ್ತು ಶಾಸಕ ಎ.ಮಂಜುನಾಥ ಪ್ರೌಢಶಾಲೆ ಕಟ್ಟಡ ಪೂರ್ಣಗೊಳಿಸಲು ಮುಂದಾಗಬೇಕಿದೆ’ ಎಂದುಪೋಷಕ ಶಂಕರ್ ಒತ್ತಾಯಿಸಿದ್ದಾರೆ.