ಬಿಡದಿ: ‘ಭಾರತೀಯ ಸಾಂಪ್ರದಾಯಿಕ ಶಿಲ್ಪಕಲೆಯು ವಿಶ್ವದಲ್ಲೇ ವಿಶೇಷವಾಗಿದ್ದು, ವಿಶ್ವದ ಉಳಿದೆಲ್ಲಾ ಕಲಾ ಪ್ರಕಾರಗಳಿಗೆ ಬುನಾದಿಯಾಗಿದೆ. ಹಾಗಾಗಿಯೇ, ದೇಶವು ಶಿಲ್ಪಕಲೆಗಳ ಆಗರವಾಗಿದೆ. ಇಲ್ಲಿರುವ ವಿಶೇಷ ಶಿಲ್ಪಕಲೆಗಳು ಬೇರೆಲ್ಲೂ ಕಾಣಸಿಗುವುದಿಲ್ಲ’ ಎಂದು ಹಿರಿಯ ಶಿಲ್ಪ ಕಲಾವಿದ ಗಣೇಶ್ ಎಲ್. ಭಟ್ ಅಭಿಪ್ರಾಯಪಟ್ಟರು.
ಕೆನರಾ ಬ್ಯಾಂಕ್ ಪ್ರಾಯೋಜಿತ ಕೆ.ಪಿ.ಜೆ ಪ್ರಭು ಕರಕುಶಲ ತರಬೇತಿ ಸಂಸ್ಥೆಯು ಶಿಲ್ಪ ಕಲಾವಿದರಿಗೆ ಇತ್ತೀಚೆಗೆ ಹಮ್ಮಿಕೊಂಡಿದ್ದ ಕೌಶಲ್ಯಾಭಿವೃದ್ಧಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
‘ಬೇಲೂರು, ಹಳೆಬೀಡು ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಇಲ್ಲಿರುವ ಶಿಲ್ಪಕಲೆಯ ವೈಭವವನ್ನು ಕಣ್ತುಂಬಿಕೊಳ್ಳಲು ವಿಶ್ವದಾದ್ಯಂತ ಪ್ರವಾಸಿಗರು ಈ ಎರಡೂ ಸ್ಥಳಗಳಿಗೆ ಭೇಟಿ ನೀಡುತ್ತಾರೆ. ಇಂತಹ ಸ್ಥಳಗಳು ರಾಜ್ಯವಷ್ಟೇ ಅಲ್ಲದೆ, ದೇಶಾದ್ಯಂತ ಇವೆ. ಇವು ಪ್ರಪಂಚಕ್ಕೆ ಭಾರತೀಯರು ನೀಡಿರುವ ಅತ್ಯುನ್ನತ ಕೊಡುಗೆಯಾಗಿವೆ’ ಎಂದರು.
ಸಂಸ್ಥೆಯ ನಿರ್ದೇಶಕ ಕೆ. ಶಿವರಾಮ್ ಮಾತನಾಡಿ, ‘ಭಾರತೀಯ ಸಾಂಪ್ರದಾಯಿಕ ಕಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕೆನರಾ ಬ್ಯಾಂಕ್ ಶ್ರಮಿಸುತ್ತಿದೆ. ಅದಕ್ಕಾಗಿ, ಸಂಸ್ಥೆ ಮೂಲಕ ತರಬೇತಿ ನೀಡುತ್ತಾ ಶಿಲ್ಪಕಲಾವಿದರನ್ನು ಸಮಾಜಕ್ಕೆ ನೀಡುತ್ತಾ ಬಂದಿದೆ. ತರಬೇತಿ ಪಡೆದ ಎಲ್ಲಾ ವಿದ್ಯಾರ್ಥಿಗಳಿಗೂ ಅವರವರ ಸಾಮರ್ಥ್ಯಕ್ಕೆ ಅನುಸಾರವಾಗಿ ಬ್ಯಾಂಕ್ ವತಿಯಿಂದ ಸಾಲ ಸೌಲಭ್ಯ ಒದಗಿಸಲಾಗುತ್ತದೆ’ ಎಂದು ಹೇಳಿದರು.
ಸಂಸ್ಥೆಯಲ್ಲಿ ತರಬೇತಿ ಪಡೆದು ಶಿಲ್ಪಕಲೆಯಲ್ಲಿ ಸಾಧನೆ ಮಾಡಿದ ಕಲಾವಿದರದಾದ ವಿಪಿನ್ಸಿಂಗ್ ಬಹದ್ದೂರಿಯ, ಮಹದೇವ್, ಸುಭಾಷ್ ವಿಶ್ವಕರ್ಮ, ರವಿರಾಜ್, ಹಾಲೇಶಪ್ಪ ಹಾಗೂ ಕಿರಣ್ ಅವರರನ್ನು ‘ಯಶಸ್ವಿ ಸಾಧಕರು’ ಎಂದು ಸನ್ಮಾನಿಸಿ ಗೌರವಿಸಲಾಯಿತು.
ಸಂಸ್ಥೆಯ ಶಿಕ್ಷಕರಾದ ಚಂದ್ರಶೇಖರ್, ಸಿದ್ದಪ್ಪ, ನರೇಶ್ ಕುಮಾರ್, ಶಿವಕುಮಾರ್, ವೆಂಕಟೇಶ್ ಹಾಗೂ ಲಕ್ಷ್ಮಿ ಇದ್ದರು.