ಬಿಡದಿ: ಪಟ್ಟಣದ ಕೆಂಚನಕುಪ್ಪೆ ಗ್ರಾಮದಲ್ಲಿ ಡಾ.ವಿಷ್ಣು ಅಭಿಮಾನಿ ಬಳಗದಿಂದ ಆಯೋಜಿಸಿದ್ದ ಸಾಹಸಸಿಂಹ ನಟ ವಿಷ್ಣುವರ್ಧನ್ ಅವರ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಬಳಗದ ಅಧ್ಯಕ್ಷ ಕೆ.ಎಸ್. ರಾಜೇಶ್ ಅವರು ವಿಷ್ಣು ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, 200ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ಅಭಿನಯಿಸಿ ಕನ್ನಡ ನಾಡಿನ ಕಲಾ ಸೇವೆ ಮಾಡಿರುವ ವಿಷ್ಣುವರ್ಧನ್ ಅವರಿಗೆ ಮರಣೋತ್ತರವಾಗಿ ಪದ್ಮಶ್ರೀ ಪ್ರಶಸ್ತಿ ನೀಡಬೇಕು ಒತ್ತಾಯಿಸಿದರು.
ಸರಳ ಸಜ್ಜನಿಕೆಗೆ ಹೆಸರಾಗಿದ್ದ ಅವರು ಚಾರಿತ್ರಿಕ, ಪೌರಾಣಿಕ ಹಾಗೂ ಸಾಮಾಜಿಕ ಕಥೆಗಳ ಪಾತ್ರಗಳಲ್ಲಿ ನಟಿಸಿ ಅಭಿಮಾನಿಗಳ ಪಾಲಿಗೆ ಆರಾಧ್ಯದೈವವಾಗಿದ್ದರು. ಇಂತಹ ಮೇರುನಟನಿಗೆ ಸ್ಮಾರಕ ನಿರ್ಮಾಣಕ್ಕೆ ಮೀನಾಮೇಷ ಎಣಿಸುವುದು ಸರಿಯಲ್ಲ. ಮೈಸೂರಿನಲ್ಲಿ ಅವರ ಸ್ಮಾರಕ ನಿರ್ಮಾಣಕ್ಕೆ ಸರ್ಕಾರ ಶೀಘ್ರ ಕ್ರಮವಹಿಸಬೇಕು ಎಂದರು.
ಚಿತ್ರರಂಗದಲ್ಲಿ ದುಡಿದ ಕಲಾವಿದರನ್ನು ಗುರುತಿಸಿ ಪ್ರತಿವರ್ಷ ವಿಷ್ಣು ಅವರ ಹೆಸರಿನಲ್ಲಿ ಪ್ರಶಸ್ತಿ ನೀಡುವ ಮೂಲಕ ಗೌರವಿಸಬೇಕು ಎಂದು ಮನವಿ ಮಾಡಿದರು.
ವಿಷ್ಣು ಅಭಿಮಾನಿಗಳ ಬಳಗದ ಕೆ.ಟಿ. ಮೋಹನ್ ಕುಮಾರ್, ಕೆ.ಟಿ. ರಂಗರಾಜ್, ಕೆ.ಸಿ. ರಾಜು, ಜಯಣ್ಣ, ಸುರೇಶ್, ಕೃಷ್ಣಮೂರ್ತಿ, ತೋಂಟದಾರ್ಯ, ಬಸವರಾಜು ಹಾಜರಿದ್ದರು. ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.