ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕನಕಪುರ | ಕೌಟುಂಬಿಕ ಕಲಹ: ಕಬ್ಬಿಣದ ರಾಡಿನಿಂದ ತಲೆಗೆ ಹೊಡೆದು ಕೊಲೆ ಮಾಡಿದ ಪತಿ

ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ದಂಪತಿ
Published 12 ಮೇ 2024, 15:58 IST
Last Updated 12 ಮೇ 2024, 15:58 IST
ಅಕ್ಷರ ಗಾತ್ರ

ಕನಕಪುರ: ದಾಂಪತ್ಯದಲ್ಲಿ ಬಿರುಕು ಬಿಟ್ಟು ದೂರವಾಗಿದ್ದ ಪತ್ನಿಯನ್ನು ಪತಿ ಕಬ್ಬಿಣದ ರಾಡಿನಿಂದ ತಲೆಗೆ ಹೊಡೆದು ಕೊಲೆ ಮಾಡಿರುವ ಘಟನೆ ರಾಮನಗರ ರಸ್ತೆಯ ಚಿಕ್ಕಮುದುವಾಡಿ ಸಂತೆ ಗೇಟ್‌ನಲ್ಲಿ ಭಾನುವಾರ ನಡೆದಿದೆ.

ಹಾರೋಹಳ್ಳಿ ತಾಲ್ಲೂಕಿನ ಪಿಚ್ಚನಕೆರೆ ಗ್ರಾಮದ ಮಂಜುಳಾ (35) ಕೊಲೆಯಾದ ಮಹಿಳೆ. ರಾಮನಗರ ತಾಲ್ಲೂಕು ವಡ್ಡರಹಳ್ಳಿ ಗ್ರಾಮದ ರಾಜೇಶ್‌ (45) ಕೊಲೆ ಆರೋಪಿ.

ರಾಜೇಶ್‌ ಮತ್ತು ಮಂಜುಳಾ 13 ವರ್ಷಗಳ ಹಿಂದ ವಿವಾಹವಾಗಿದ್ದು, ದಂಪತಿಗೆ 12 ವರ್ಷದ ಮಗಳು ಇದ್ದಾಳೆ.

ದಂಪತಿ ನಡುವೆ ಹೊಂದಾಣಿಕೆ ಆಗದೆ ಆಗಾಗ ಜಗಳವಾಡುತ್ತಿದ್ದು ಕಳೆದ ಎರಡು ವರ್ಷಗಳಿಂದ ದೂರವಾಗಿ ಮಂಜುಳ ಪಿಚ್ಚನಕೆರೆ ಗ್ರಾಮದಲ್ಲಿ ತಾಯಿಯ ಮನೆಯಲ್ಲಿ ವಾಸವಾಗಿದ್ದರು.

ಭಾನುವಾರ ಮಧ್ಯಾಹ್ನ ಸುಮಾರು 12 ಗಂಟೆ ಸಮಯದಲ್ಲಿ ರಾಮನಗರ ರಸ್ತೆಯ ಚಿಕ್ಕಮುದುವಾಡಿ ಸಂತೆಗೇಟ್‌ನಲ್ಲಿರುವ ಪ್ರಯಾಣಿಕರ ತಂಗುದಾಣದಲ್ಲಿ ಮಂಜುಳ ಕುಳಿತಿದ್ದ ವೇಳೆ ರಾಜೇಶ್‌ ಬೈಕ್‌ನಲ್ಲಿ ಹೆಲ್ಮೆಟ್‌ ಹಾಕಿಕೊಂಡು ಬಂದು ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿ ಅಲ್ಲಿಂದ ಪರಾರಿಯಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ರಾಡಿನಿಂದ ಹಲ್ಲೆ ನಡೆಸಿ ತಲೆ ಹೊಡೆದಿದ್ದರಿಂದ ಮಂಜುಳ ಕೆಳಗೆ ಬಿದ್ದು ಅತಿಯಾದ ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇದರಿಂದ ಬೆಚ್ಚಿ ಬಿದ್ದ ಸ್ಥಳದಲ್ಲಿದ್ದವರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಮಾಹಿತಿ ತಿಳಿದ ಪೊಲೀಸರು ಘಟನಾ ಸ್ಥಳಕ್ಕೆ ದೌಡಾಯಿಸಿ ಸ್ಥಳ ಪರಿಶೀಲನೆ ನೆಡೆಸಿ ಮೃತದೇಹವನ್ನು ದಯಾನಂದ ಸಾಗರ್‌ ಆಸ್ಪತ್ರೆಗೆ ಸ್ಥಳಾಂತರಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಘಟನೆ ಸಂಬಂಧ ಮೃತರ ಸಹೋದರ ಮಹೇಶ್ ದೂರು ನೀಡಿದುದ್ದು, ‘ತನ್ನ ಅಕ್ಕ ಮಂಜುಳಾ ಮತ್ತು ಭಾವ ರಾಜೇಶ್ ನಡುವೆ ಹೊಂದಾಣಿಕೆ ಇರಲಿಲ್ಲ. ಆಗ್ಗಾಗೆ ಜಗಳ ಆಡುತ್ತಿದ್ದರು. ಕಳೆದ ಎರಡು ವರ್ಷಗಳ ಹಿಂದೆ ದೂರವಾಗಿದ್ದು, ವಿಚ್ಛೇದನಕ್ಕೆ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು’.

‘ಅದಾದ ಮೇಲೆ ರಾಜೇಶ್ ಅಕ್ಕ ಮಂಜುಳಾ ಅವರನ್ನು ಹಿಂಬಾಲಿಸುತ್ತಿದ್ದು ಮನೆ ಹತ್ತಿರ ಬಂದು ಜಗಳವಾಡುತ್ತಿದ್ದರು. ಭಾನುವಾರ ತನ್ನ ಅಕ್ಕ ಮಂಜುಳಾ ಅವರನ್ನು ಹಿಂಬಾಲಿಸಿ ರಾಡಿನಿಂದ ಹೊಡೆದು ಸಾಯಿಸಿದ್ದಾರೆ’ ಎಂದು ಗ್ರಾಮಾಂತರ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಘಟನೆ ನಡೆದ ನಂತರ ಆರೋಪಿ ತಲೆಮರೆಸಿಕೊಂಡಿದ್ದು, ಆರೋಪಿಗಾಗಿ ಪೊಲೀಸರು ಶೋಧಕಾರ್ಯ ನಡೆಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT